Connect with us

DAKSHINA KANNADA

ಮದ್ದಲೆಯ ಮಾಂತ್ರಿಕ ಶತಾಯುಷಿ ಹಿರಿಯಡ್ಕ ಗೋಪಾಲ್ ರಾವ್ ಇನ್ನಿಲ್ಲ..!

Published

on

ಮದ್ದಲೆಯ ಮಾಂತ್ರಿಕ ಶತಾಯುಷಿ ಹಿರಿಯಡ್ಕ ಗೋಪಾಲ್ ರಾವ್ ಇನ್ನಿಲ್ಲ..!

ಉಡುಪಿ : ಯಕ್ಷಗಾನ ಕ್ಷೇತ್ರದ ಅನರ್ಘ್ಯ ರತ್ನಗಳಲ್ಲಿ ಒಬ್ಬರಾಗಿದ್ದ ‘ಮದ್ದಲೆ ಮಾಂತ್ರಿಕ’ ಖ್ಯಾತಿಯ ಶತಾಯುಷಿ ಹಿರಿಯಡ್ಕ ಗೋಪಾಲರಾಯರು ನಿನ್ನೆ ರಾತ್ರಿ ಉಡುಪಿ ಹಿರಿಯಡ್ಕದ ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.

ಅವರಿಗೆ 101 ವರ್ಷ ವಯಸ್ಸಾಗಿತ್ತು. ಅವರು ಪುತ್ರ, ಅಪಾರ ಬಂಧುಮಿತ್ರರು ಹಾಗೂ ಅಭಿಮಾನಿ ವೃಂದವನ್ನು ಅಗಲಿದ್ದಾರೆ.

ಕರಾವಳಿಯ ಮೂರು ಜಿಲ್ಲೆಗಳ ಯಕ್ಷಗಾನ ಲೋಕದಲ್ಲಿ ‘ಮದ್ದಲೆ ಮಾಂತ್ರಿಕ’ ರೆಂದೇ ಹೆಸರಾದ ಹಿರಿಯಡ್ಕ ಗೋಪಾಲರಾಯರು ಕಳೆದ ವರ್ಷ ತಮ್ಮ ನೂರು ವರ್ಷ ಪ್ರಾಯದಲ್ಲೂ ನವತಾರುಣ್ಯದ ಎಲ್ಲಾ ಛಾಪನ್ನು ತೋರಿಸಿ ತಮ್ಮ ಕೈಬೆರಳುಗಳಲ್ಲಿದ್ದ ಮದ್ದಲೆಯ ಮಾಂತ್ರಿಕತೆಯನ್ನು ತೋರಿಸಿ ಕಲಾಪ್ರೇಮಿಗಳು ಮತ್ತು ತನ್ನ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದರು.

1919ರ ಡಿ.15ರಂದು ಹಿರಿಯಡ್ಕದಲ್ಲಿ ಜನಿಸಿದ ಗೋಪಾಲರಾಯರು ಕಲಿತಿದ್ದು 6ನೇ ತರಗತಿಯವರೆಗೆ ಮಾತ್ರ. ಆದರೆ ಯಕ್ಷಗಾನ ಚೌಕಿ ಹಾಗೂ ರಂಗಸ್ಥಳದಲ್ಲಿ ಅವರು ಕಲಿತಿದ್ದು ಬದುಕಿನ ಕಲೆಯನ್ನು ಮಾತ್ರ.

16ನೇ ವಯಸ್ಸಿನಲ್ಲಿ ತಂದೆ ಶೇಷಗಿರಿ ರಾವ್ ರಿಂದ ಮದ್ದಲೆಯನ್ನು ಅಭ್ಯಾಸ ಮಾಡಿದ ಗೋಪಾಲರಾಯರು ಬಳಿಕ ನೃತ್ಯವನ್ನು ಗುರು ನಾಗಪ್ಪ ಕಾಮತರಿಂದ ಕಲಿತರು.

1934ರಲ್ಲಿ ಹಿರಿಯಡ್ಕ ಮೇಳದಲ್ಲಿ ಪಾತ್ರಧಾರಿಯಾಗಿ ಪ್ರವೇಶ ಪಡೆದ ಅವರು 1936ರಲ್ಲಿ ಸಹ ಮದ್ದಲೆ ಕಲಾವಿದರಾದರು.

ಮುಂದಿನ ವರ್ಷವೇ ಪೆರ್ಡೂರು ಮೇಳದಲ್ಲಿ ಪ್ರಧಾನ ಮದ್ದಲೆಕಾರರಾಗಿ ಸೇರಿದ ಗೋಪಾಲರಾಯರು ನಂತರ ಹಿಂದಿರುಗಿ ತಿರುಗಿ ನೋಡದೆ ಯಶಸ್ಸಿನ ಮೆಟ್ಟಲುಗಳನ್ನು ಏರುತ್ತಲೇ ಹೋದರು.

1939ರಿಂದ 67ರವರೆಗೆ ಅವರು ಅಂದು ಬಡಗುತಿಟ್ಟಿನ ಪ್ರಧಾನ ಮೇಳ ವಾದ ಮಂದಾರ್ತಿ ಮೇಳದ ಪ್ರಧಾನ ಮದ್ದಲೆಕಾರರಾಗಿ ದುಡಿದರು.

ಈ ನಡುವೆ 1961ರಲ್ಲಿ ಕೋಟ ಶಿವರಾಮ ಕಾರಂತರ ಸಂಪರ್ಕಕ್ಕೆ ಬಂದ ಗೋಪಾಲ ರಾಯರು, ಅವರ ಯಕ್ಷಗಾನ ನೃತ್ಯಗಳಿಗೆ ಹಾಗೂ ಯಕ್ಷಗಾನ ಗೋಷ್ಠಿಗಳಲ್ಲಿ ಮದ್ದಲೆಕಾರರಾಗಿ ಕಾರ್ಯನಿರ್ವಹಿಸಿದರು.

ಕಾರಂತರ ಒಡನಾಟ ಸಿಕ್ಕ ಬಳಿಕ ಗೋಪಾಲರಾಯರ ಯಕ್ಷಗಾನ ಬದುಕಿಗೆ ಹೊಸ ದಾರಿ ದೊರೆತಂತಾಯಿತು. ಮುಂದೆ 1968ರಲ್ಲಿ ಕಾರಂತರು ಬ್ರಹ್ಮಾವರದಲ್ಲಿ ಪ್ರಾರಂಭಿಸಿದ ಯಕ್ಷಗಾನ ಕೇಂದ್ರಕ್ಕೆ ಅಧ್ಯಾಪಕರಾಗಿ ಸೇರಿದರು.

ಮರುವರ್ಷ ಪೀಟರ್ ಕ್ಲಾಸ್‌ರ ಜೊತೆ ಕ್ಯಾಲಿಫೋರ್ನಿಯ ವಿವಿಯಲ್ಲಿ ಕೆಲಸ ಮಾಡಿದರು. 1970ರಲ್ಲಿ ಕಾರಂತರ ಸಲಹೆಯಂತೆ ಉಡುಪಿಗೆ ಮರಳಿದ ಗೋಪಾಲರಾಯರು, ಇಲ್ಲಿ ಯಕ್ಷಗಾನದಲ್ಲಿ ಡಾಕ್ಟರೇಟ್ ಮಾಡಲು ಬಂದ ಮಾರ್ತಾ ಆಸ್ಟನ್‌ಗೆ ಯಕ್ಷಗಾನ ನೃತ್ಯ ಕಲಿಸಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದರು. ಯಕ್ಷಗಾನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ ಪ್ರಥಮ ವಿದೇಶಿ ಮಹಿಳೆ ಮಾರ್ತಾ ಆಸ್ಟಿನ್  ಆಗಿದ್ದಾರೆ.

ಹಲವು ಬಾರಿ ಯಕ್ಷಗಾನ ತಂಡಗಳೊಂದಿಗೆ ವಿದೇಶಿಗಳಿಗೆ ಪ್ರಯಾಣ ಬೆಳೆಸಿದ  ಗೋಪಾಲರಾಯರಿಗೆ 1972ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1997ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 1998ರಲ್ಲಿ ಜಾನಪದಶ್ರೀ ಪ್ರಶಸ್ತಿ, 2012ರಲ್ಲಿ ಜಾನಪದ ಸಿರಿ ಪ್ರಶಸ್ತಿಗಳನ್ನು ಪಡೆದಿದ್ದರು. 2018ರಲ್ಲಿ ಅವರಿಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ವತಹ ಸಚಿವೆ ಜಯಮಾಲ ಅವರೇ ಹಿರಿಯಡ್ಕದ ಅವರಿಗೆ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಿದ್ದರು.

DAKSHINA KANNADA

ಮಂಗಳೂರಿನ ಒಣಮೀನು ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಕ್ರಮ : ಡಾ.ನಾಗಲಕ್ಷ್ಮಿ ಚೌಧರಿ

Published

on

ಮಂಗಳೂರು : ಮಂಗಳೂರಿನ ಕೇಂದ್ರ ಮಾರುಕಟ್ಟೆಯ ಒಣಮೀನು ಮಾರಾಟಗಾರ ಮಹಿಳೆಯರಿಗೆ ಸೆಂಟ್ರಲ್ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ಹವಾನಿಯಂತ್ರಿತ ಮಾರುಕಟ್ಟೆಯಲ್ಲಿ ಜಾಗದ ಕೊರತೆ, ಬಾಡಿಗೆ ದುಬಾರಿಯ ದೂರು ಬಂದಿದೆ. ಮಾರುಕಟ್ಟೆಗಳು ಅದೆಷ್ಟು ಸುವ್ಯವಸ್ಥಿತ, ಹವಾನಿಯಂತ್ರಿತವಾಗಿದ್ದರೂ ಅದನ್ನು ಬಳಕೆ ಮಾಡುವವರಿಗೆ ಅದು ಹೊಂದಿಕೆಯಾಗಬೇಕು, ಸಬ್ಸಿಡಿ ದರದಲ್ಲಿ ದೊರೆಯಬೇಕು. ಅದಲ್ಲದೆ ಹಾಲಿ ಒಣ ಮೀನು ಮಾರುಕಟ್ಟೆ ಮಳೆಗಾಲದಲ್ಲಿ ಸೋರಿಕೆಯಾಗುತ್ತಿದ್ದು ಅದಕ್ಕೆ ಸೂಕ್ತ ವ್ಯವಸ್ಥೆ ಆಗಬೇಕಾಗಿದೆ. ಈ ಬಗ್ಗೆ ಪಾಲಿಕೆಯ ಆಯುಕ್ತರು ಕ್ರಮ ವಹಿಸುವುದಾಗಿ ತಿಳಿಸಿದ್ದು, ಕೈಗೊಳ್ಳುವ ಕ್ರಮದ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.

ದ.ಕ. ಜಿಲ್ಲಾ ಭೇಟಿಯಲ್ಲಿರುವ ಅವರು ಶನಿವಾರ(ಮಾ.07) ಜಿಲ್ಲಾ ಪಂಚಾಯತ್‌ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಕುಸಿತ :

ಬಂಟ್ವಾಳದ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತುಂಬಾ ಕಡಿಮೆ ಆಗುತ್ತಿದೆ. ತಿಂಗಳಿಗೆ ನಾಲ್ಕರಿಂದ ಐದಷ್ಟೇ ಆಗುತ್ತಿದ್ದು, ಇದು ಉತ್ತಮ ಸಂದೇಶವಲ್ಲ ಎಂದು ಹೇಳಿದ ಅವರು, ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರ ಹುದ್ದೆ ಖಾಲಿ ಇದೆ. ಹಾಗಾಗಿ ಅಲ್ಲಿ ಸಹಜ ಹೆರಿಗೆಗೆ ಯಾರೂ ಬರುತ್ತಿಲ್ಲ, ಬದಲಾಗಿ ಮಂಗಳೂರಿನ ಲೇಡಿಗೋಶನ್‌ಗೆ ಹೋಗುತ್ತಾರೆಂಬ ಕಾರಣ ನೀಡಲಾಗಿದೆ.

ಆದರೆ, ಬಂಟ್ವಾಳದಿಂದ ಸುಮಾರು 25 ಕಿ.ಮೀ. ದೂರದ ಮಂಗಳೂರಿನ ಲೇಡಿಗೋಶನ್‌ಗೆ ಹೆರಿಗೆಗಾಗಿ ಗರ್ಭಿಣಿಯರು ಬರಬೇಕಾಗುತ್ತದೆ. ಅಗತ್ಯ ವೈದ್ಯರು , ವ್ಯವಸ್ಥೆಯನ್ನು ತಾಲೂಕು ಆಸ್ಪತ್ರೆಗಳಲ್ಲಿ ಒದಗಿಸಿದರೆ ಜನ ಯಾಕೆ ಬರುವುದಿಲ್ಲ ಎಂದು ಪ್ರಶ್ನಿಸಿದಾಗ, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಸ್ವಾಗತಾರ್ಹ ಬೆಳವಣಿಗೆ :

ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧಮಾಡಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ನಾಗಲಕ್ಷ್ಮೀ, ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು. ಈ ಬಗ್ಗೆ ನಾನು ಈ ಹಿಂದೆ ವಿದೇಶ ಪ್ರವಾಸ ಮಾಡಿ ಬಂದ ಬಳಿಕ ಸಿಎಂ ಅವರ ಗಮನಕ್ಕೆ ತಂದಿದ್ದೆ. ಅವರು ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಬ್ಯಾನ್ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

 

Continue Reading

DAKSHINA KANNADA

ಮಂಗಳೂರು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ : ಸಾಧಕಿಯರಿಗೆ ಆತ್ಮಸಮ್ಮಾನ ಕಾರ್ಯಕ್ರಮ

Published

on

ಮಂಗಳೂರು : ಜಿಲ್ಲಾ ರಾಜ್ಯೋತ್ಸವ, ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಸಾಧಕ ಮಹಿಳೆಯರಿಗೆ ಆತ್ಮಸಮ್ಮಾನ ಕಾರ್ಯಕ್ರಮ ಇಂದು ಪಡೀಲ್ ಆತ್ಮಶಕ್ತಿ ಸೌಧದಲ್ಲಿ ನಡೆಯಿತು. ಕಾಂಗ್ರೆಸ್ ಮುಖಂಡೆ, ಸಾಮರಸ್ಯ ಬಳಗದ ಅಧ್ಯಕ್ಷೆ ಮಂಜುಳಾ ನಾಯಕ್ ಅತಿಥಿಗಳ ಜೊತೆ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿ,  ಮಹಿಳಾ ದಿನಾಚರಣೆಯ ದಿನ ಮಾತ್ರ ಮಹಿಳೆಯರನ್ನು ಗೌರವಿಸೋದಲ್ಲ. ದಿನನಿತ್ಯ ಮಹಿಳೆಯರನ್ನು ಗೌರವದಿಂದ ಕಾಣಬೇಕು. ಅವರ ಕಷ್ಟಕ್ಕೆ ಸ್ಪಂದಿಸಿದಾಗ ಮಾತ್ರ ಈ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಸುಮನಾ ಶರಣ್ ಮಾತನಾಡಿ, ಸಹಕಾರಿ ಚುನಾವಣೆಯಲ್ಲಿ ಕೂಡಾ ಮಹಿಳೆಯರಿಗೆ 13 ಸೀಟಿನಲ್ಲಿ 2 ಮಾತ್ರ ಮೀಸಲಾತಿ ಇದೆ. ಅದು ಕೂಡ  50 ಶೇಕಡಕ್ಕೆ  ಬರಬೇಕು ಎಂಬುದು ನನ್ನ ಆಸೆ ಎಂದರು.

ಸಾಹಿತಿ ಶಶಿಲೇಖಾ ಬಿ ಹಾಗೂ ಪ್ರಾಣಿ ರಕ್ಷಕಿ ಉಷಾ ಸುವರ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ,  ಸನ್ಮಾನ ಸ್ವೀಕರಿಸಿದ ಇಬ್ಬರು ಮಹಿಳೆಯರ ಸಾಧನೆ ಕೂಡ ಅತ್ಯಂತ ಶ್ಲಾಘನೀಯವಾದದ್ದು. ನಮ್ಮ ಸಂಘದ  ವತಿಯಿಂದ ಕಳೆದ 14 ವರ್ಷದಿಂದ  ನಿರಂತರವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ.  ಮಹಿಳೆಯರು ಜೀವನದಲ್ಲಿ ಉತ್ತುಂಗದ ಸ್ಥಾನಕ್ಕೆ ಏರಬೇಕು ಎಂದು ಹೇಳಿದರು.

ಇದನ್ನೂ ಓದಿ : ಆದಿಲಕ್ಷ್ಮೀ ಪುರಾಣ ಸೀರಿಯಲ್‌ನಿಂದ ಹೊರನಡೆದ ನಟಿ!

ಕಾರ್ಯಕ್ರಮದಲ್ಲಿ  ಉಪಾಧ್ಯಕ್ಷ  ನೇಮಿರಾಜ್ ಪಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ ಸೇರಿದಂತೆ ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Continue Reading

BANTWAL

2028ಕ್ಕೆ ರಮಾನಾಥ ರೈ ಅಭ್ಯರ್ಥಿ: ನಾವೂರು ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

Published

on

ಬಂಟ್ವಾಳ: 2028ಕ್ಕೂ ನಾವೇ ಅಧಿಕಾರಕ್ಕೆ ಬಂದೇ ಬರ್ತೀವಿ. ನಾವು ಅಧಿಕಾರದಲ್ಲಿದ್ದಾಗ ಕಂಬಳಕ್ಕೆ ಏನು ಪ್ರೋತ್ಸಾಹ ನೀಡಬೇಕೋ ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ. ಕಂಬಳಕ್ಕೆ ಹಣಕಾಸಿನ ನೆರವನ್ನೂ ಕೊಡ್ತೇವೆ, ರಮಾನಾಥ ರೈ ಅವರನ್ನು ಸೋಲಿಸಿದ್ದು ಬೇಸರ ತಂದಿದೆ, ಮುಂದಿನ ಚುನಾವಣೆಯಲ್ಲಿ ಅವರೇ ಅಭ್ಯರ್ಥಿಯಾಗ್ತಾರೆ, ಅವರನ್ನು ಮತ್ತೆ ಗೆಲ್ಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬಂಟ್ವಾಳದ ನಾವೂರು ಕೂಡಿಬೈಲು ಎಂಬಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶನಿವಾರ ನಡೆದ ಮುಡೂರು ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಮಾನಾಥ ರೈ ಅವರು ತಮ್ಮ ಶಾಸಕ,ಸಚಿವರಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಜನರು ಸೋಲಿಸಿರುವುದು ನೋವಿನ ಸಂಗತಿಯಾಗಿದೆ. ಇನ್ನೊಂದು ಸಾರಿ ಅವರು ನಿಲ್ಲುತ್ತಾರೆ. 2028ಕ್ಕೆ ಮತ್ತೆ ಅಭ್ಯರ್ಥಿ ಆಗುತ್ತಾರೆ ಎಂದರು

ಬೆಂಜನಪದವು ಕ್ರೀಡಾಂಗಣ
ಬೆಂಜನಪದವಿನಲ್ಲಿ ಹತ್ತು ಕೋಟಿ ರೂ ಮಂಜೂರಾಗಿತ್ತು, ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ. ಮತ್ತೊಮ್ಮೆ ಕ್ರೀಡಾಂಗಣ ನಿರ್ಮಾಣಕ್ಕೆ ನನಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಪ್ರಾಸ್ರಾವಿಕವಾಗಿ ಮಾತನಾಡಿದ ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಈ ಬಾರಿ ಕ್ರೀಡಾಂಗಣ ನಿರ್ಮಾಣಕ್ಕೆ ನೆರವು ನೀಡುವುದಾಗಿ ಹೇಳಿದರು.

ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾವಾಚಸ್ಪತಿ ಡಾ.ಸಂತೋಷ್ ಗುರೂಜಿ, ಎಂ ಎಲ್ ಸಿ ಸಲೀಮ್ ಆಹ್ಮದ್, ಐವಾನ್ ಡಿಸೋಜ, ಶಾಸಕರುಗಳಾದ ಅಶೋಕ್ ಕುಮಾರ್ ರೈ ,ಟಿ.ಡಿ.ರಾಜೇಗೌಡ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿವಿಧ ನಿಗಮದ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್,ಟಿ.ಎಮ್ ಶಹೀದ್ ತೆಕ್ಕಿಲ್, ಮಮತಾ ಡಿ.ಎಸ್. ಗಟ್ಟಿ,ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಸಹಿತ ಪ್ರಮುಖರು ಹಾಜರಿದ್ದರು. ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಸ್ವಾಗತಿಸಿದರು.

WATCH VIDEO:

Continue Reading
Advertisement

Trending

Copyright © 2025 Namma Kudla News

You cannot copy content of this page