Connect with us

BELTHANGADY

ಶಾಸಕನ ಬಂಧನಕ್ಕೆ ಮುಂದಾದ ಪೊಲೀಸರು…! ಎಚ್ಚರಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ…!

Published

on

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಸು ದಾಖಲಿಸಿಕೊಂಡ ಪೊಲೀಸರು ಇಂದು ಹರೀಶ್ ಪೂಂಜಾ ಬಂಧನಕ್ಕೆ ಮುಂದಾಗಿದ್ದಾರೆ.

ಬೆಳ್ತಂಗಡಿಯಲ್ಲಿ ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸ್ಫೋಟಕ ಕಾಯ್ದೆಯಡಿ ಬಂಧನವಾಗಿರುವ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಪರವಾಗಿ ಹರೀಶ್ ಪೂಂಜ ಪ್ರತಿಭಟನೆ ನಡೆಸಿದ್ದರು. ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಅನುಮತಿ ಇಲ್ಲದೆ ಪ್ರತಿಭಟನೆ ಮಾಡಿಸಿದ್ದು ಮಾತ್ರವಲ್ಲದೆ ಸಭೆಯಲ್ಲಿ ಅವರು ಮಾಡಿದ ಭಾಷಣದ ವಿಚಾರವಾಗಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

ಪೊಲೀಸ್ ಅಧಿಕಾರಿಗಳ ವಿರುದ್ಧ ಕೀಳು ಮಟ್ಟದ ಭಾಷೆ ಪ್ರಯೋಗಿಸಿದ್ದು, ಮತ್ತು ಡಿಜೆ ಹಳ್ಳಿ ಕೆ.ಜಿ ಹಳ್ಳಿ ಮಾದರಿಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಶಾಸಕರು ಹೇಳಿದ್ದರು. ಇದೀಗ ಪೊಲೀಸರು ಶಾಸಕ ಹರೀಶ್ ಪೂಂಜಾ ಮನೆಗೆ ಆಗಮಿಸಿ ಅವರ ಬಂಧನಕ್ಕೆ ಮುಂದಾಗಿದ್ದಾರೆ. ಆದ್ರೆ ಈ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ತೀವೃವಾಗಿ ಖಂಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ ಇದು ಕಾಂಗ್ರೆಸ್ ಸರ್ಕಾರದ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಮೋರ್ಚಾದ ಅಧ್ಯಕ್ಷನ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದನ್ನು ಕೇಳಲು ಶಾಸಕರು ಹೋಗಿದ್ದಾರೆ. ಅವರ ಬಿಡುಗಡೆಗೆ ಪ್ರತಿಭಟನೆ ಮಾಡಿದ್ದಾರೆ. ಇದನ್ನು ನೀತಿ ಸಂಹಿತೆಯ ಕಾರಣ ನೀಡಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ದೊಡ್ಡ ವಿಚಾರ ಮಾಡಿದ್ದಾರೆ. ನಮ್ಮ ಶಾಸಕನನ್ನು ಬಂಧಿಸಿದರೆ ಉಗ್ರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಮುಂದಾದ ವಿಚಾರದ ಸುದ್ದಿ ತಿಳಿದು ಪೂಂಜಾ ಪರ ವಕೀಲರು ಹಾಗೂ ಬೆಂಬಲಿಗರು ಆಗಮಿಸಿದ್ದಾರೆ. ಶಾಸಕರ ಬಂಧನಕ್ಕೆ ಅವಕಾಶ ನೀಡದಂತೆ ಕಾರ್ಯಕರ್ತರು ತಮ್ಮ ವಾಹನಗಳನ್ನು ದಾರಿಗೆ ಅಡ್ಡವಾಗಿಟ್ಟಿದ್ದಾರೆ. ಈ ವಿಚಾರವಾಗಿ ಮಾತನಾಡಿದ ವಕೀಲರು ಪೊಲೀಸರು ನಿಯಮ ಬಾಹಿರವಾಗಿ ಶಾಸಕರನ್ನು ಬಂಧಿಸಲು ಮುಂದಾಗಿದ್ದಾರೆ. ವಿಚಾರಣೆಗೆ ಹಾಜರಾಗಿ ಅಂತ ನೊಟೀಸು ಕೂಡ ನೀಡದೆ ನೇರವಾಗಿ ಮನೆಗೆ ಬಂದಿದ್ದಾರೆ. ಇದು ತಪ್ಪು ಎಂದು ಹೇಳಿದ್ದಾರೆ. ಡಿಎಸ್‌ಪಿಯವರು ನಿಮ್ಮನ್ನು ಬಂಧಿಸಲು ಬಂದಿದ್ದಲ್ಲ ವಿಚಾರಣೆಗೆ ಬನ್ನಿ ಎಂದು ಕರೆಯಲು ಬಂದಿದ್ದು ಎಂದಿದ್ದಾರೆ. ಆದರೆ ಈ ರೀತಿಯಾಗಿ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

BELTHANGADY

ಭೂತದ ಮನೆಯಲ್ಲಿ ನೀರವ ಮೌನ…! ಮನೆಬಿಟ್ಟು ಹೋದ ಕುಟುಂಬ

Published

on

ಬೆಳ್ತಂಗಡಿ: ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಬೆಳ್ತಂಗಡಿಯ ಮಾಲಾಡಿ ಗ್ರಾಮದ ಭೂತದ ಮನೆಯಲ್ಲಿ ಸದ್ಯ ನೀರವ ಮೌನ ಆವರಿಸಿದೆ. ಕಳೆದ ಮೂರು ತಿಂಗಳಿನಿಂದ ಭೂತದ ಉಪಟಳದಿಂದ ಬಳಲಿ ಬೆಂಡಾಗಿರುವ ಕುಟುಂಬ ಮನೆಯನ್ನೇ ಖಾಲಿ ಮಾಡಿ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಸಲಿಗೆ ಕಳೆದೆರಡು ದಿನಗಳಿಂದ ಈ ಮನೆಯಲ್ಲಿನ ಭೂತದ ಉಪಟಳ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಈ ಮನೆಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ನೂರಾರು ಜನ ಬಂದು ಭೂತದ ಹುಡುಕಾಟ ನಡೆಸಿದ್ದರು. ಭೂತದ ಇರುವಿಕೆಯ ವಿಚಾರವಾಗಿ ಪರ ವಿರೋಧದ ಚರ್ಚೆಗಳು ಆರಂಭವಾಗಿ ಹಲವರು ಮನೆಯವರ ಕಥೆಯೇ ಸುಳ್ಳು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ನಮ್ಮ ಕುಡ್ಲ ವಾಹಿನಿ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದಾಗಲೂ ಇದು ಭೂತದ ಕಾಟ ಇರಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಖ್ಯಾತ ಮನೋರೋಗ ತಜ್ಞರು ಹಾಗೂ ಪವಾಡ ರಹಸ್ಯ ಬಯಲು ತಜ್ಞ ಡಾ. ಹುಲಿಕಲ್ ನಟರಾಜ್ ಅವರೂ ಕೂಡಾ ಮನೆಯವರ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದರು.

ಇದೀಗ ಉಮೇಶ್ ಶೆಟ್ಟಿ ಅವರ ಇಡೀ ಕುಟುಂಬ ಭೂತದ ಭಯದಿಂದ ಮನೆಯನ್ನು ಬಿಟ್ಟು ಹೋಗಿದ್ದು, ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ.

Continue Reading

BELTHANGADY

ಬೆಳ್ತಂಗಡಿ : ಏಕಕಾಲದಲ್ಲಿ ಒಂಬತ್ತು ಗುಳಿಗ ದೈವಗಳ ನರ್ತನ ಕಂಡು ಕಣ್ತುಂಬಿಸಿಕೊಂಡ ಭಕ್ತರು

Published

on

ಬೆಳ್ತಂಗಡಿ : ದೈವಾರಾಧನೆಯನ್ನು ಕರಾವಳಿ ಜನತೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಾಡುವ ಕಾರಣಕ್ಕಾಗಿಯೇ ಇಲ್ಲಿ ದೈವಾರಾಧನೆಗೆ ವಿಶಿಷ್ಟ ಸ್ಥಾನಮಾನವಿದೆ. ಹಾಗಾಗಿ ಇಂದಿಗೂ ಸುಮಾರು 500 ಕ್ಕೂ ಹೆಚ್ಚು ದೈವಗಳನ್ನು ಆರಾಧಿಸಲಾಗುತ್ತದೆ. ಇದೀಗ ಬೆಳ್ತಂಗಡಿ ತಾಲೂಕಿನ ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವಗುಳಿಗ ದೈವಗಳಿಗೆ ಏಕಕಾಲದಲ್ಲಿ ನಡೆದ ನರ್ತನ ಸೇವೆ ಭಕ್ತರಿಗೆ ಒಂದು ವಿಶಿಷ್ಟ ಅನುಭವವನ್ನು ನೀಡಿದ್ದು, ಈ ಅಪರೂಪದ ಸೇವೆ ಇಡೀ ಕರಾವಳಿಯಲ್ಲಿಯೇ ಒಂದೇ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ.

“ಐದು ವರ್ಷಗಳ ಹಿಂದೆ ನಿಟ್ಟಡೆ ಗ್ರಾಮದ ಬರ್ಕಜೆ ಎಂಬ ಊರಿನಲ್ಲಿ ಪುನರ್ ನಿರ್ಮಾಣವಾದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವ ಗುಳಿಗ ದೈವಗಳು ಕ್ಷೇತ್ರಪಾಲಕರಾಗಿ ನೆಲೆಸಿದ್ದಾರೆ ಅನ್ನೋ ವಿಚಾರ ಗೊತ್ತಾಗಿತ್ತು. ಹೀಗಾಗಿ ಆ ಒಂಬತ್ತು ದೈವಗಳಿಗೂ ಏಕಕಾಲದಲ್ಲಿ ನರ್ತನ ಸೇವೆ ಮಾಡಲಾಗುತ್ತಿದೆ” ಎಂಬುವುದು ಆಡಳಿತ ಮುಖ್ಯಸ್ಥರ ಮಾತು. ಸಾಮಾನ್ಯವಾಗಿ ಏಕಕಾಲದಲ್ಲಿ ಒಂದೆರಡು ಗುಳಿಗ ದೈವಗಳಿಗೆ ಮಾತ್ರ ನರ್ತನ ಸೇವೆ ನಡೆಯುತ್ತವೆ. ಆದರೆ, ಬರ್ಕಜೆಯಲ್ಲಿ ಒಂಬತ್ತು ಗುಳಿಗ ದೈವಗಳಿಗೆ ನರ್ತನ ಸೇವೆ ನೆರವೇರಿದೆ.

ಇದನ್ನೂ ಓದಿ : ಮಂಗಳೂರು : ಇಂದಿನಿಂದ 3 ದಿನ ಪಾಂಡೇಶ್ವರದಲ್ಲಿ ಬೃಹತ್ ಐಸ್‌ಕ್ರೀಂ ಪರ್ಬ

ಗುಳಿಗ ದೈವದ ಆರಾಧನೆ ಕರಾವಳಿ ಭಾಗದಲ್ಲಿ ಬಹು ಆಕರ್ಷಕ. ಅದರ ರೋಷಾವೇಷ ನೋಡೋದೇ ಒಂದು ರೋಮಾಂಚಕ ಅನುಭವ. ತುಳುನಾಡಿನಾದ್ಯಂತ ಆರಾಧಿಸಲ್ಪಡುವ ಗುಳಿಗ ದೈವಗಳು, ಕ್ಷೇತ್ರಪಾಲಕರಾಗಿ ನೆಲೆಸಿ, ಜನರ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಒಂದೇ ದಿನ ಒಂದೇ ಬಾರಿ ಈ ನವ ಗುಳಿಗ ದೈವಗಳಿಗೆ ಗಗ್ಗರ ಸೇವೆ ನಡೆದಿದ್ದು, ಬರ್ಕಜೆ ಗ್ರಾಮದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದ ಈ ಬಾರಿಯ ವಾರ್ಷಿಕ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು. ಒಂಬತ್ತು ಮಂದಿ ದೈವ ನರ್ತಕರು ಏಕಕಾಲದಲ್ಲಿ ನವ ಗುಳಿಗನ ನೇಮೋತ್ಸವ ನಡೆಸಿಕೊಟ್ಟಿದ್ದು, ಈ ಅದ್ಭುತವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

Continue Reading

BELTHANGADY

ಮಾಲಾಡಿ ಮನೆಯ ದೆವ್ವದ ರಹಸ್ಯವೇನು ಗೊತ್ತಾ..?

Published

on

ಬೆಳ್ತಂಗಡಿ ತಾಲೂಕಿನ ಮಾಲಾಡಿ ಎಂಬ ಗ್ರಾಮದಲ್ಲಿ ಭೂತದ ಕಾಟ ನಡೆಯುತ್ತಿರುವುದು ಈಗ ಕುತೂಹಲ ಮೂಡಿಸಿದೆ. ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದು ಭೂತದ ಚೇಷ್ಟೆ ಎಂದು ಮನೆಯವರು ಹೇಳಿಕೊಂಡಿದ್ದಾರೆ.

ಏಕಾಏಕಿ ಬೆಂಕಿ ತಗುಲಿ ಹೊತ್ತಿ ಉರಿಯುವ ಬಟ್ಟೆಗಳು.. ಇದ್ದಕ್ಕಿದ್ದಂತೆ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗುವ ಜೋಡಿಸಿಟ್ಟ ಅಡುಗೆ ಪಾತ್ರೆಗಳು… ಕತ್ತಲಾಗುತ್ತಿದ್ದಂತೆ ಮನೆಯಲ್ಲಿ ಇನ್ಯಾರೋ ಓಡಾಡಿದಂತೆ ಆಗುವ ಅನುಭವ. ಹೌದು ಇಂತಹ ಒಂದು ಘಟನೆ ಮನೆಯೊಂದರಲ್ಲಿ ನಡೆಯುತ್ತಿದ್ದು ಕಳೆದ ಮೂರು ತಿಂಗಳಿನಿಂದ ಮನೆಯವರು ನಿದ್ರೆಯನ್ನೇ ಕಳೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿದೆಯಂತೆ.

ಮೊಬೈಲ್‌ನಲ್ಲಿ ದೆವ್ವದ ಫೋಟೊ ಸೆರೆ

ಕತ್ತಲು ಆವರಿಸುತ್ತಿದ್ದಂತೆ ನಡೆಯುವ ಈ ವಿಚಿತ್ರಕಾರಿ ಘಟನೆಯಿಂದ ಮಾಲಾಡಿಯ ಈ ಮನೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಉಮೇಶ್ ಶೆಟ್ಟಿ ಹಾಗೂ ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಈ ಮನೆಯಲ್ಲಿ ವಾಸವಾಗಿದ್ದು, ಕಳೆದ ಮೂರು ತಿಂಗಳಿನಿಂದ ಈ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ. ವಿಶೇಷ ಅಂದ್ರೆ ಉಮೇಶ್ ಶೆಟ್ಟಿ ಅವರ ಮಗಳು ತನ್ನ ಮೊಬೈಲ್ ಮೂಲಕ ಈ ವಿಚಿತ್ರ ಘಟನೆಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ವೇಳೆ ಮಹಿಳೆಯ ಮುಖವನ್ನು ಹೋಲುವ ಆಕೃತಿಯೊಂದು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದೆ. ಹೀಗಾಗಿ ಇದು ಭೂತದ ಚೇಷ್ಟೆ ಅಂತ ಹೇಳಲಾಗಿದ್ದು, ಗ್ರಾಮದ ಜನರು ಇದರ ಪರಿಶೀಲನೆ ನಡೆಸಲು ಈ ಮನೆಗೆ ಬರ್ತಾ ಇದ್ದಾರೆ.

ಕೇವಲ ಮನೆಯವರಷ್ಟೇ ಇರುವಾಗ ಇಂತಹ ವಿಚಿತ್ರಕಾರಿ ಘಟನೆಗಳು ನಡೆದಿದೆ ಅನ್ನುವುದು ಇಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಊರಿನ ಜನರು ಬಂದು ಇದರ ಸತ್ಯಾಸತ್ಯತೆ ತಿಳಿಯುವ ಪ್ರಯತ್ನ ನಡೆಸಿದ್ದಾರೆಯಾದ್ರೂ ಯಾರಿಗೂ ಇಂತಹ ಅನುಭವ ಉಂಟಾಗಿಲ್ಲ. ಹಾಗಂತ ಉಮೇಶ್ ಅವರ ಪತ್ನಿಗೆ ಉಸಿರುಗಟ್ಟಿದಂತಹ ಅನುಭವ ಹೊರತು ಪಡಿಸಿದ್ರೆ ಬೇರೆ ಏನು ಇಲ್ಲಿ ಕಂಡು ಬಂದಿಲ್ಲ. ಆದ್ರೆ ಅವರ ಉಸಿರುಗಟ್ಟುವಿಕೆಗೂ ಭೂತಕ್ಕೂ ಸಂಬಂಧ ಇದೆಯಾ ಅನ್ನೋದು ಕೂಡಾ ಖಚಿತವಾಗಿಲ್ಲ.

ಯಾವಾಗ ಇವರು ಮೊಬೈಲ್‌ನಲ್ಲಿ ವಿಚಿತ್ರ ಆಕೃತಿಯ ಫೋಟೊ ತೆಗೆದು ಊರ ಜನರಿಗೆ ತೋರಿಸಿದ್ರೋ ಆವಾಗಿನಿಂದ ಇಲ್ಲಿಗೆ ಪ್ರತಿ ನಿತ್ಯ ರಾತ್ರಿಯಾಗುತ್ತಿದ್ದಂತೆ ಜನರು ಬರಲು ಆರಂಭಿಸಿದ್ದಾರೆ. ಆದ್ರೆ ಊರವರ ಮುಂದೆ ಭೂತ ಪ್ರತ್ಯಕ್ಷವಾಗದೇ ಇರೋ ಕಾರಣ ಈ ಕಥೆಯ ಬಗ್ಗೆಯೇ ಜನರಿಗೆ ಅನುಮಾನ ಆರಂಭವಾಗಿದೆ. ಅಸಲಿಗೆ ಇಲ್ಲಿ ನಡೆಯುತ್ತಿರುವುದು ಭೂತದ ಚೇಷ್ಟೆಯೋ ಅಥವಾ ಮನುಷ್ಯ ನಿರ್ಮಿತ ಚೇಷ್ಟೆಯೋ ಅನ್ನೋ ಅನುಮಾನಗಳು ಜನರಿಗೆ ಕಾಡಿದೆ.

ಭಯದ ವಾತವಾರಣರದಲ್ಲಿ ಕತ್ತಲಲ್ಲಿ ಮೊಬೈಲ್ ಹಿಡಿದು ಭೂತದ ಫೋಟೊ ಹೇಗೆ ತೆಗೆದರು ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಹಾಗಂತ ಈ ರೀತಿ ಭೂತ ಇದೆ ಅಂತ ಸುಳ್ಳು ಹೇಳುವುದರಿಂದಲೂ ಇವರಿಗೇನು ಸಿಗುತ್ತದೆ ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ಈ ವಿಚಾರದಲ್ಲಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಭೂತದ ಹುಟುಕಾಟಕ್ಕೆ ಜನರು ಮುಂದಾಗಿದ್ದಾರೆ. ಕೆಲವರು ಇದು ಹೌದು ಅಂದ್ರೆ ಇನ್ನೂ ಕಲವರು ಇದು ಸುಳ್ಳು ಅಂದಿದ್ದು, ಇದರ ಹಿಂದೆ ಏನೋ ಮಸಲತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಇದರ ಅಸಲಿ ಸತ್ಯ ಏನು ಅನ್ನೋ ಬಗ್ಗೆ ಈ ಮನೆಯವರ ಕೌನ್ಸಿಲಿಂಗ್ ಮಾಡಿದ್ರಷ್ಟೇ ಗೊತ್ತಾಗಬಹುದು ಅನ್ನೋದು ಹಲವರ ಅಭಿಪ್ರಾಯ.

Continue Reading
Advertisement

Trending

Copyright © 2025 Namma Kudla News

You cannot copy content of this page