ಹಿರಿಯ ಸಾಹಿತಿ, ಪತ್ರಕರ್ತ ಶತಾಯುಷಿ ಡಾ.ಪಾಟೀಲ್ ಪುಟ್ಟಪ್ಪ ನಿಧನ
ಬೆಂಗಳೂರು: ಹಿರಿಯ ಸಾಹಿತಿ, ಹೋರಾಟಗಾರ, ಪತ್ರಕರ್ತ ಶತಾಯುಷಿ ಡಾ.ಪಾಟೀಲ ಪುಟ್ಟಪ್ಪ ನಿನ್ನೆ (ಮಾರ್ಚ್ 16) ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಕಿಮ್ಸ್ಗೆ ದಾಖಲಾಗಿದ್ದ ಹಿರಿಯ ಸಾಹಿತಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಪಾಪು ಎಂದೇ ಖ್ಯಾತಿ ಗಳಿಸಿದ್ದ ಪಾಟೀಲ್ ಪುಟ್ಟಪ್ಪರಿಗೆ ಭರ್ತಿ 101 ವರ್ಷ ವಯಸ್ಸಾಗಿತ್ತು.
ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪುಟ್ಟಪ್ಪನವರನ್ನು ಪರೀಕ್ಷಿಸಿದ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ, ಕಿಡ್ನಿ ಸೋಂಕಿಗೆ ಒಳಗಾಗಿದೆ ರಕ್ತದ ಕೊರತೆ ಇದೆ, ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದರು.
ಇದೀಗ ಅಪಾರ ಸಾಹಿತ್ಯಾಭಿಮಾನಿಗಳನ್ನು ಪುಟ್ಟಪ್ಪ ಅಗಲಿದ್ದಾರೆ.

ಇಂದು ಮಧ್ಯಾಹ್ನದವರೆಗೆ ಹುಬ್ಬಳ್ಳಿಯಲ್ಲಿರುವ ಪುಟ್ಟಪ್ಪ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ.
ಸಂಜೆ ಅವರ ಹುಟ್ಟೂರಾದ ಹಲಗೇರಿಯಲ್ಲಿ ಅಂತಿಮ ಸಂಸ್ಕಾರದ ವಿಧಿ-ವಿಧಾನಗಳು ಜರುಗಲಿವೆ.
ಪುಟ್ಟಪ್ಪನವರು ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಇತ್ತೀಚಿಗಷ್ಟೇ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

“ಕನ್ನಡ ನಾಡಿನ ಸಾಕ್ಷಿಪ್ರಜ್ಞೆಯಾಗಿ, ಸಂಸ್ಕೃತಿ ರಕ್ಷಕರಾಗಿ, “ಪ್ರಪಂಚ” ಪತ್ರಿಕೆಯ ಸ್ಥಾಪಕ ಸಂಪಾದಕರಾದ ನಾಡೋಜ ಪಾಟೀಲ ಪುಟ್ಟಪ್ಪ 1921 ಜನವರಿ 14ರಂದು, ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು.
ಕುರುಬಗೊಂಡ, ಬ್ಯಾಡಗಿ, ಹಾವೇರಿ, ಧಾರವಾಡದಲ್ಲಿ ಪುಟ್ಟಪ್ಪನವರು ಪ್ರಾಥಮಿಕ ಶಿಕ್ಷಣ ಪಡೆದರು.
ಕರ್ನಾಟಕ ಕಾಲೇಜಿನಲ್ಲಿ ಪದವಿ ಹಾಗೂ ಬೆಳಗಾವಿಯಲ್ಲಿ ಕಾನೂನು ಅಧ್ಯಯನ ಮಾಡಿ ಮುಂಬಯಿ ಮತ್ತು ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದರು.
1945ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದ ಪುಟ್ಟಪ್ಪನವರು, 1949ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಅಮೆರಿಕದಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕರಾಗಿ, 1954ರಲ್ಲಿ ಪ್ರಪಂಚ ಪತ್ರಿಕೆಯನ್ನು ಆರಂಭಿಸಿದ್ದರು.
1962ರಿಂದ 1974ರ ವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಇವರು, 1942ರ ಆಗಸ್ಟ್ 9ರಂದು ಕಾಲೇಜಿನ ಬ್ರಿಟಿಷ್ ಅಧ್ಯಾಪಕರಿಗೆ ಬಲವಂತವಾಗಿ ಗಾಂಧಿ ಟೋಪಿ ಹಾಕಿ ಸುದ್ದಿಯಾಗಿದ್ದರು.
ಡಾ. ಪಾಟೀಲ ಪುಟ್ಟಪ್ಪನವರು ಅಪ್ರತಿಮ ಹೋರಾಟಗಾರರು, ನಿರ್ಭೀತ ಪತ್ರಕರ್ತರು ಹಾಗೂ ಸೃಜನಶೀಲ ಸಾಹಿತಿಯಾಗಿದ್ದರು.
ನಮ್ಮ ದೇಶ ನಮ್ಮ ಜನ, ನನ್ನದು ಈ ಕನ್ನಡ ನಾಡು, ಕರ್ನಾಟಕದ ಕಥೆ, ಪಾಪು ಪ್ರಪಂಚ, ಶಿಲಾಬಾಲಿಕೆ ನುಡಿದಳು, ಗವಾಕ್ಷ ತೆರೆಯಿತು, ಸಾವಿನ ಮೇಜವಾನಿಗಳಂತಹ ಅಪೂರ್ವ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದರು.
ಪ್ರಪಂಚದಷ್ಟೆ ಓದುಗರ ಜ್ಞಾನವೂ ವಿಸ್ತಾರವಾಗಬೇಕೆಂಬ ಹಂಬಲದಿಂದ ತಮ್ಮ ಸಂಪಾದಕತ್ವದಲ್ಲಿ ಪ್ರಪಂಚ ವಾರಪತ್ರಿಕೆಯನ್ನು ನಡೆಸಿದವರು.
ಕರ್ನಾಟಕ ಏಕೀಕರಣಕ್ಕಾಗಿ ಅವರು ನಡೆಸಿದ ಹೋರಾಟ ಅನನ್ಯವಾದುದು.
ವರ್ತಮಾನದ ಎಲ್ಲ ವಿಚಾರಗಳ ಬಗ್ಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿನ ಅವರ ಅಂಕಣ ಬರಹಗಳು ಓದುಗರಿಗೆ ಮನ ಗೆದ್ದಿದ್ದವು.
ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪುಟ್ಟಪ್ಪನವರು ನಾಡಿನಾದ್ಯಂತ ಕೈಗೊಂಡ ಕನ್ನಡ ಭಾಷಾ ಜಾಗೃತಿ ಅಭಿಯಾನ ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸದೃಢವಾಗಿ ಬೆಳೆಸುವಲ್ಲಿ ಪುಟ್ಟಪ್ಪನವರ ಪಾತ್ರ ಶ್ಲಾಘನೀಯವಾಗಿದೆ.
ಇಂತಹ ಮಹಾನ್ ಮೇಧಾವಿ ಬೆಳಗಾವಿಯಲ್ಲಿ 2003ರಲ್ಲಿ ಜರುಗಿದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಸಾಹಿತ್ಯ ಹಾಗೂ ಮಾದ್ಯಮ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗೆ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಟಿಎಸ್ಆರ್ ಪತ್ರಿಕಾ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್ ಪದವಿ.
ಹಂಪಿ ವಿಶ್ವವಿದ್ಯಾಲಯದ ನಾಡೋಜ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಸಾಹಿತ್ಯ ಹೀಗೆ ಹತ್ತು ಹಲವು ಪ್ರಶಸ್ತಿಗಳು ಮುಡಿಗೇರಿವೆ.