ಮಂಗಳೂರು: ಮಡಿಕೇರಿಯಲ್ಲಿ ಪೊನ್ನಂಪೇಟೆಯಲ್ಲಿ ಭಜರಂಗದಳ ಕಾರ್ಯಕರ್ತರಿಗೆ ಆಯುಧ ತರಬೇತಿ ಹಾಗೂ ತ್ರಿಶೂಲ ದೀಕ್ಷೆ ನೀಡಿರುವ ವಿಹೆಚ್ಪಿ ಯ ಕಾರ್ಯಕ್ರಮಕ್ಕೆ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯುಟಿ ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದುಪರ ಸಂಘಟನೆಯ ಕಾರ್ಯಕರ್ತರಿಗೆ ಬಂದೂಕು ಚಲಾಯಿಸುವ ತರಬೇತಿ ಹಾಗೂ ತ್ರಿಶೂಲ ದೀಕ್ಷೆಯನ್ನು ನೀಡುವ ಮೂಲಕ ರಾಜ್ಯ ಸರ್ಕಾರ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ನೇರವಾಗಿ ಕುಮ್ಮಕ್ಕು ನೀಡುತ್ತಿದ್ದು ತಾಲಿಬಾನ್ ಸಂಸ್ಕೃತಿಯನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿದರು.

ಶಾಲೆಗಳಲ್ಲಿ ಮಕ್ಕಳಿಗೆ ಪೆನ್ನು ಪುಸ್ತಕ ನೀಡಿ ಉತ್ತಮವಾದ ಶಿಕ್ಷಣವನ್ನು ಕೊಟ್ಟು ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಬದಲು ಮಕ್ಕಳಿಗೆ ಶಸ್ತ್ರಾಸ್ತ್ರವನ್ನು ಕಲಿಸುವ ಹಾಗೂ ರೈಫಲ್ ಟ್ರೈನಿಂಗ್ ಕಲಿಸುವುದರ ಹಿಂದಿರುವ ಉದ್ದೇಶವೇನು ಎಂಬುದಕ್ಕೆ ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರು ರಾಜ್ಯದ ಜನತೆಗೆ ಉತ್ತರ ನೀಡಬೇಕು.
ಈ ಬಗ್ಗೆ ಯಾರೋ ಶಿಕ್ಷಣ ಸಂಸ್ಥೆಗಳಲ್ಲಿ ಎನ್ಸಿಸಿ ಹಾಗೂ ಬೇರೆ ಬೇರೆ ಸೇನಾ ಶಿಕ್ಷಣವನ್ನು ನೀಡುತ್ತಾರಲ್ವ ಅದೇ ರೀತಿ ಇದು ಎನ್ನುತ್ತಾರೆ. ಆದರೆ ಅದಕ್ಕೆ ಸರ್ಕಾರದ ಅಥಾರಿಟಿ ಇದೆ. ಸಂಸ್ಥೆಗಳು ಸರ್ಕಾರದ ಪರ್ಮಿಷನ್ ತೆಗೆದುಕೊಂಡಿರುತ್ತದೆ.
ಇಂತಹ ಶಿಕ್ಷಣವನ್ನು ಕಲಿಸುವ ಶಿಕ್ಷಣ ಸಂಸ್ಥೆಗಳ ಹಿಂದೆ ಮಕ್ಕಳಲ್ಲಿ ದೇಶ ಪ್ರೇಮವನ್ನು ಬಿತ್ತರಿಸುವ ಉದ್ದೇಶವಿರುತ್ತದೆ. ಇದಕ್ಕೆ ಏನು ಅಥಾರಿಟಿ ಇದೆ? ಅದೇ ಒಂದು ವೇಳೆ ನಾವು ಯೂತ್ ಕಾಂಗ್ರೆಸ್ ವತಿಯಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾದಳದವರಿಗೆ ಇಂತಹ ತರಬೇತಿ ನೀಡಿದರೆ ಅದನ್ನು ಭಯೋತ್ಪಾದನೆ ಎಂದು ಕರೆಯುತ್ತಾರೆ. ದಲಿತ ಸಂಘಟನೆ ಮಾಡುತ್ತಿದ್ದರೆ ಏನೆಲ್ಲಾ ವಿಚಾರಗಳು ಬರುವ ಸಾಧ್ಯತೆ ಇರುತ್ತಿತ್ತು.

ಆದರೆ ಯಾರು ಯಾರನ್ನೋ ಕರೆದುಕೊಂಡು ಎಲ್ಲೆಲ್ಲೋ ಈ ಥರ ತರಬೇತಿ ನೀಡಿದ್ರೆ ಇದಕ್ಕೆ ಯಾರ ಪರ್ಮಿಷನ್ ಆಗಿದೆ. ಇದನ್ನು ಸರ್ಕಾರ ಶೀಘ್ರವಾಗಿ ಗಣನೆಗೆ ತೆಗೆದುಕೊಳ್ಳಬೇಕು. ಇದನ್ನು ಮಾಡಿಸುತ್ತಿರುವ ಸಂಘಟನೆಯ ಉದ್ದೇಶವೇನು ಎಂಬುವುದರ ಬಗ್ಗೆ ಹಾಗೆಯೇ ಸರ್ಕಾರ ಭವಿಷ್ಯದ ಉದ್ದೇಶದಲ್ಲಿ ತನಿಖೆ ಮಾಡಬೇಕಾದ್ದು ಕರ್ತವ್ಯ.
ಆದರೆ ಇದನ್ನು ಮೌನವಾಗಿ ಕೂತು ನೋಡುತ್ತಿರುವ ಶಿಕ್ಷಣ ಇಲಾಖೆಯ ಸಚಿವರು, ಗೃಹಸಚಿವರು ಪರೋಕ್ಷವಾಗಿ ಇದಕ್ಕೆ ಬೆಂಬಲ ಕೊಟ್ಟಂತಹ ರೀತಿಯಲ್ಲಿ ಕಾಣುತ್ತಿದೆ ಎಂದು ಕಿಡಿಕಾರಿದರು.
ಪ್ರಸ್ತುತ ಇರುವ ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿ ‘ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಒಂದೇ ಒಂದು ಶಾಲೆ ನಿರ್ಮಾಣ ಆಗಿಲ್ಲ. ಅದೇ ರೀತಿ ಜಿಲ್ಲೆಯಲ್ಲಿ ಪ್ರೈಮರಿ ಬಿಡಿ ಅಂಗನವಾಡಿ ಕೂಡಾ ಆಗಿಲ್ಲ. ಅದೇ ರೀತಿ ರಾಜ್ಯದಲ್ಲಿ ಒಂದೇ ಒಂದು ಡಿಗ್ರಿ ಕಾಲೇಜು ನಿರ್ಮಾಣ ಆಗಿಲ್ಲ, ವಿದ್ಯಾರ್ಥಿಗಳಿಗೆ ಬೇಕಾಗುವ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೂಡಾ ಸರಿಯಾಗಿ ಆಗ್ತಾ ಇಲ್ಲ.
ಸಮವಸ್ತ್ರದ ಬಗ್ಗೆ ಸರಿಯಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಅದೇ ರೀತಿ ಪಠ್ಯ ಪುಸ್ತಕಗಳು ಕೂಡಾ ಸರಿಯಾಗಿ ಬರ್ತಾ ಇಲ್ಲ. ಮಕ್ಕಳ ಶಿಕ್ಷಣಕ್ಕೆ ಪೂರಕವಾದದ್ದು ಏನೂಮಾಡದೆ ಬರೀ ಇಂತಹ ಕೆಲಸ ಮಾಡುತ್ತಿರುವುದು ಎಷ್ಟು ಸರಿ? ಉದ್ಯೋಗ ಸಿಕ್ಕಿಲ್ಲ ಎಂದು ಒಬ್ಬ ಸೋದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದ್ರೆ ಇದಕ್ಕೆ ಏನು ಕಾರಣ. ಸರ್ಕಾರ ಜನ ವಿರೋಧಿ ನೀತಿ ಜಾರಿಗೆ ತಂದಿದೆ ಈ ಬಗ್ಗೆ ಸರ್ಕಾರ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ಇನ್ನು ರೈಫಲ್ ಶಿಕ್ಷಣದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾ ಕಲಿಕೆಯ ಹಂತದಲ್ಲಿ ರೈಫಲ್ ಟ್ರೈನಿಂಗ್ ಕೊಡ್ಲಿಕ್ಕೆ, ಗನ್ ಹಿಡಿದುಕೊಂಡು ಸುತ್ತಾಡಿಕೊಂಡು ಹೋಗಲು ಇದೇನು ಬಿಹಾರವೋ ಅಥವಾ ಗುಜರಾತ್ ರಾಜ್ಯವೋ..? . ನಾಳೆ ಇನ್ನೊಬ್ಬರು ಬರುತ್ತಾರೆ, ಹೀಗೇ ಮಾಡುತ್ತಾರೆ. ಒಂದು ವೇಳೆ ಆತ್ಮ ರಕ್ಷಣೆ ಉದ್ದೇಶದಲ್ಲಿ ಕೊಡುವುದಾದರೆ ಇಡೀ ಸ್ಕೂಲ್ ಸೆಲೆಬಸ್ನಲ್ಲಿ ಎಲ್ಲರಿಗೂ ಕೊಡ್ಲಿ. ಅದಕ್ಕಂತಲೇ ಸೀಮಿತ ಅವಧಿ ಇಡಲಿ.
ಆಯ್ದ ಮಕ್ಕಳಿಗೆ ಮಾತ್ರ ಯಾಕೆ. ಬಡವರ ಮಕ್ಕಳಿಗೆ ಕೂಡಾ ಇರಲಿ. ಅದ್ಯಾಕೆ ಬೇಡ ಇದನ್ನೆಲದಲ ಕೇಳೋರು ಯಾರೂ ಇಲ್ಲವೇ ಎಂದು ಪ್ರಶ್ನಿಸಿದರು.
ಗೃಹಸಚಿವರಿಗೂ ಕಂಟ್ರೋಲ್ ಇಲ್ಲ, ಶಿಕ್ಷಣ ಸಚಿವರಿಗೂ ಕಂಟ್ರೋಲ್ ಇಲ್ಲ. ಸ್ವಸ್ಥ ಸಮಾಜದ ಉದ್ದೇಶವನ್ನಿಟ್ಟುಕೊಂಡು ಸರ್ಕಾರ ತಾಯಿ ಹೃದಯದಿಂದ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಬೇಕು. ಈ ವಿಷಯಕ್ಕೆ ಸಂಬಂಧಿಸಿ ಸೂಕ್ತ ಕ್ರಮ ಕೈಗೆತ್ತಿಕೊಂಡು ಸರ್ಕಾರ ಜನರಿಗೆ ಸ್ಪಷ್ಟನೆ ನೀಡಬೇಕು’ ಎಂದು ಹೇಳಿದರು.
ಇನ್ನು ಮೊನ್ನೆ ತಾನೇ ಧಾರ್ಮಿಕ ಕಾರ್ಯಕ್ರಮದಲ್ಲಿ ‘ನನಗೆ ಮುಸ್ಲಿಂರ ಮತ ಬೇಡ, ಹಿಂದೂಗಳ ಮತವಷ್ಟೇ ಸಾಕು’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ಹೇಳಿಕೆ ಖಂಡಿಸಿ ಪ್ರತಿಕ್ರಿಯಿಸಿ ‘ಎಂಡೋಸಲ್ಫಾನ್ ಪೀಡಿತರನ್ನು ಮುಂದೆ ನಿಲ್ಲಿಸಿ ಚುನಾವಣೆ ಗೆದ್ದು, ಇದೀಗ ಎಂಡೋಸಲ್ಫಾನ್ ಪೀಡಿತರನ್ನು ಕೇಳುವ ಗತಿಯಿಲ್ಲದಂತಾಗಿದೆ.
ನಾನು ಆರೋಗ್ಯ ಸಚಿವನಾಗಿದ್ದಾಗ ತಂದಿರುವ ಯೋಜನೆ ಬಿಟ್ಟರೆ, ಅದಕ್ಕೆ ಹೊಸ ಯೋಜನೆ ಜೋಡಣೆಯಾಗಿಲ್ಲ. ಅಲ್ಲದೆ ನನ್ನ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನವೂ ಆಗಿಲ್ಲ. ಎಂಡೋಸಲ್ಫಾನ್ ಪೀಡಿತ ಮಕ್ಕಳನ್ನು ಫ್ರೀಡಂ ಪಾರ್ಕ್ ಗೆ ಕೊಂಡೊಯ್ದು ಪ್ರತಿಭಟನೆ ಮಾಡಿದ ಅವರು, ಶಾಸಕನಾದ ಬಳಿಕ ಅವರಿಗೇನಾದರೂ ಮಾಡಿದ್ದಾರೆಯೇ? ಪರಿಪಕ್ವವಲ್ಲದ ಇಂತಹ ಮಾತಿಗೆ ನಾನು ಪ್ರತಿಕ್ರಿಯೆ ಮಾಡೋದಿಲ್ಲ.
ಚೀಪ್ ಪಾಲಿಟಿಕ್ಸ್, ಅವರವರ ರಾಜಕೀಯ ಅವರವರದ್ದು. ಬೆಳ್ತಂಗಡಿಯ ಜನತೆ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ. ಯಾರು ಅವರಿಗೆ ಓಟ್ ಕೊಟ್ಟಿದ್ದಾರೆ ಅವರ ಕೆಲಸವಾದರೂ ಹರೀಶ್ ಪೂಂಜಾ ಮಾಡಲಿ ಎಂದು ಖಾರವಾಗಿ ನುಡಿದರು.