Connect with us

DAKSHINA KANNADA

ಉಡುಪಿ ಕಾಪುವಿನಲ್ಲಿ ಬ್ಯಾರಿಗೇಟಿಗೆ ಸ್ಕೂಟಿ ಡಿಕ್ಕಿ :ಮಂಗಳೂರಿನ ಯುವತಿ ಮೃತ್ಯು..!

Published

on

ರೋಶಿನಿ ಡಿಸೋಜ ಸಾವನ್ನಪ್ಪಿದ ಯುವತಿಯಾಗಿದ್ದಾಳೆ.
ರೋಶಿನಿ ತನಗೆ ವಿವಾಹ ನಿಶ್ಚಯವಾಗಿದ್ದ ಯುವಕ ಜೊಯೇಲ್ ಎಂಬವರ ಜೊತೆ ಮಂಗಳೂರಿನಿಂದ ಕಲ್ಮಾಡಿ ಚರ್ಚಿಗೆ ಭೇಟಿ ನೀಡಿ ಮಂಗಳೂರಿಗೆ ವಾಪಾಸಾಗುತ್ತಿದ್ದ ವೇಳೆ ಕಟಪಾಡಿ ಸಮೀಪದ ಮೂಡಬೆಟ್ಟು  ಬಳಿ ರಸ್ತೆಯ ಬಲಬದಿಯಲ್ಲಿ ಡಿವೈಡರ್‌ ಪಕ್ಕದಲ್ಲಿ ಸ್ಕೂಟಿ ಚಲಾಯಿಸುತ್ತಿದ್ದಾಗ  ಉಡುಪಿ ಕಡೆಯಿಂದ ಬಂದ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ನಿಲ೯ಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದು ಏಕಾಏಕಿಯಾಗಿ ಬಸ್ಸನ್ನು ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟಿ ಹಿಂದೆ ಕುಳಿತಿದ್ದ ರೋಶನಿಯವರ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದು ಬಸ್ಸನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.
 ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ರೋಶನಿ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗಳಾಗಿತ್ತು, ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ದಾರಿ ಮಧ್ಯೆ ಮೃತರಾಗಿದ್ದಾರೆ .
ಕಳೆದ ಒಂದು ವಾರದಿಂದ ಕಟಪಾಡಿ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಯು ಅರ್ಧಂಬರ್ಧವಾಗಿದ್ದು ಸರಿಯಾದ ಯಾವುದೇ ನಾಮಫಲಕ ಅಳವಡಿಸಿದ ಪರಿಣಾಮವಾಗಿ ಹೆದ್ದಾರಿಯಲ್ಲಿ ದಿನೇ ದಿನೇ ಅಪಘಾತಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಇನ್ನೂ ಕೂಡ ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಅನಾಹುತಗಳು ಸಂಭವಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

DAKSHINA KANNADA

ವೈರಲ್ ಫೋಟೋ…ಧಾರ್ಮಿಕ ವಿಚಾರ…ರಾಜಕೀಯ…ಪ್ರಕಾಶ್ ರಾಜ್ ಹೇಳಿದ್ದೇನು?

Published

on

ಮಂಗಳೂರು : ಧರ್ಮ ವಿರೋಧಿಯಿಂದ ಕುಂಭಸ್ನಾನ ಎಂಬ ಫೋಟೋ ವೈರಲ್‌ ಆದ ವಿಚಾರವಾಗಿ ನಟ ಪ್ರಕಾಶ್ ರಾಜ್‌ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ವೈರಲ್ ಆದ ಫೋಟೋ ಪ್ರಕಾಶ್ ರಾಜ್ ಅವರದ್ದಲ್ಲ ಎಂಬ ಸತ್ಯ ಕೂಡ ಬಹಿರಂಗವಾಗಿದೆ. ಇದೀಗ ಇದೇ ವಿಚಾರವಾಗಿ ಮಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಪ್ರಕಾಶ್ ರಾಜ್ ಮಾತನಾಡಿದ್ದಾರೆ.

ಒಂದು ಪಕ್ಷವನ್ನು ಪ್ರಶ್ನೆ ಮಾಡಿದರೆ ಧರ್ಮವನ್ನು ಪ್ರಶ್ನೆ ಮಾಡಿದಂತೆ ನಮ್ಮ ಮೇಲೆ ದಾಳಿ ಮಾಡಲಾಗುತ್ತಿದೆ. ವ್ಯಾಟ್ಸಾಪ್ ಯೂನಿವರ್ಸಿಟಿಯಿಂದ ಈ ಕೆಲಸ ಆಗುತ್ತಿದೆ.  ಪ್ರಶಾಂತ್ ಸಂಬರ್ಗಿಯಂತವರು ಈ ಕೆಲಸ ಮಾಡುತ್ತಿದ್ದಾರೆ. ಅವರು ಪ್ರಖ್ಯಾತರು, ಕುಖ್ಯಾತರೋ ಗೊತ್ತಿಲ್ಲ. ಈ ಬಗ್ಗೆ ದೂರು ನೀಡಿದ್ದೇನೆ. ಬಂದು ಉತ್ತರಿಸಲಿ. ವ್ಯಕ್ತಿಯ ಇಚ್ಛೆಯಿಲ್ಲದೆ ಫೋಟೋ ತಿರುಚುವುದು ಸರಿಯಲ್ಲ ಎಂದು ಕಿಡಿಕಾರಿದರು.

ನಾನು ಧರ್ಮ ವಿರೋಧಿಯಲ್ಲ. ಹಾಗಂತ ನನಗೆ ನಂಬಿಕೆ ಇಲ್ಲ. ನನ್ನದು ಸೌಹಾರ್ದತೆ. ಎಲ್ಲರಿಗೂ ಒಂದೊಂದು ಅನಿಸಿಕೆ ಎಂಬುದು ಇರುತ್ತದೆ.  ಧಾರ್ಮಿಕ ವಿಚಾರದಲ್ಲಿ ರಾಜಕಾರಣ ಮಾಡುವವರು ನಿಜವಾದ ಹಿಂದುಗಳಲ್ಲ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಇದನ್ನೂ ಓದಿ : ಬೀದರ್ ATM ದರೋಡೆ ಪ್ರಕರಣ; ದರೋಡೆಕೋರರ ಸುಳಿವು ಕೊಟ್ಟವರಿಗೆ ಬಂಪರ್ ಬಹುಮಾನ

ಸರ್ಕಾರ ಯಾವುದೇ ಇರಲಿ ಸರ್ಕಾರದ ಕೆಲಸವನ್ನು ಪ್ರಶ್ನೆ ಮಾಡುವುದು ಜನರಿಗೆ ಇರುವ ಹಕ್ಕು. ದೇವಸ್ಥಾನ ಅಭಿವೃದ್ದಿಯಲ್ಲಿ ಹೇಗೆ ಜನರ ಹಣ ಬಳಕೆಯಾಗುತ್ತದೆಯೋ ಅದೇ ರೀತಿ ಸರ್ಕಾರ ನಡೆಸಲು ಕೂಡಾ ಜನರ ಹಣವೇ ಬಳಕೆಯಾಗುತ್ತಿರುವುದು. ದೇವಸ್ಥಾನಕ್ಕೆ ಹಣ ಹೇಗೆ ವಿನಿಯೋಗ ಆಗಿದೆ ಅಂತ ಚಿಂತಿಸುವ ನಾವು ನಮ್ಮ ಹಣವನ್ನು ರಾಜಕಾರಣಿಗಳು ಹೇಗೆ ವಿನಿಯೋಗಿಸಿದ್ದಾರೆ ಅಂತ ಪ್ರಶ್ನೆ ಮಾಡಬೇಕು. ಚುನಾವಣೆಗಳಲ್ಲಿ ಜನರು ಸರ್ಕಾರಗಳನ್ನು ಅದಲು ಬದಲು ಮಾಡಬಹುದು ಆದರೆ ಯಾರೇ ಬಂದ್ರೂ ಪ್ರಶ್ನೆ ಮಾಡುವುದು ತಪ್ಪಲ್ಲ. ಹಾಗಂತ ಒಂದು ಪಕ್ಷದವರನ್ನು ಪ್ರಶ್ನೆ ಮಾಡಿದ್ರೆ ಧರ್ಮದ್ರೋಹಿ ಅನ್ನೋ ಪಟ್ಟ ನೀಡುವುದು ಸರಿಯಾದ ಕ್ರಮ ಅಲ್ಲ ಎಂದಿದ್ದಾರೆ.

Continue Reading

DAKSHINA KANNADA

ಕಾಸರಗೋಡು: ಮಂಗಳೂರು ಸೆಂಟ್ರಲ್ ರೈಲ್ವೆ ಪೊಲೀಸರ ದರ್ಪ, ಕಾಲು ಕಳೆದುಕೊಂಡ ಯೋಧ..!?

Published

on

ಕಾಸರಗೋಡು: ರೈಲು ನಿಲ್ದಾಣದಲ್ಲಿರುವ ಬೆಂಚಿನ ಮೇಲೆ ಮಲಗಿದ್ದ ಮಾಜಿ ಯೋಧರೊಬ್ಬರ ಮೇಲೆ ಪೊಲೀಸರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯದಿಂದಾಗಿ ಆ ವ್ಯಕ್ತಿ ಎಡ ಕಾಲು ಕಳೆದುಕೊಳ್ಳುವಂತಾದ ದಾರುಣ ಘಟನೆಯೊಂದು ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಕಾಸರಗೋಡು ಜಿಲ್ಲೆಯ ನಿಲೇಶ್ವರ ನಿವಾಸಿ ಭಾರತೀಯ ವಾಯು ಪಡೆಯ ನಿವೃತ್ತ ಗ್ರೌಂಡ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್ ಸಾರ್ಜೆಂಟ್ ಪಿ ವಿ ಸುರೇಶನ್ (49) ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯಾಗಿದ್ದಾರೆ.

ಸುರೇಶನ್‌ ಅವರು ಪ್ರತಿ ತಿಂಗಳ ಮೊದಲ ದಿನದಂದು ಮಂಗಳೂರಿನ ಮಿಲಿಟರಿ ಕ್ಯಾಂಟೀನಿಗೆ ಭೇಟಿ ನೀಡುತ್ತಿದ್ದು, ಅದರಂತೆ ಫೆಬ್ರವರಿ 1 ರಂದು ನೀಲೇಶ್ವರದಿಂದ ಮಲಬಾರ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದು ಬೆಳಗ್ಗೆ 10.15 ಕ್ಕೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಇಳಿದಿದ್ದರು. ಕಿಕ್ಕಿರಿದ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸಿದ್ದರಿಂದ ಬಳಲಿಕೆಯಿಂದ ಅಸ್ವಸ್ಥಗೊಂಡ ಕಾರಣ ವಿಶ್ರಾಂತಿಗಾಗಿ ನಿಲ್ದಾಣದ ಬೆಂಚಿನ ಮೇಲೆ ಮಲಗಿದ್ದರು.

ಕೆಲ ಹೊತ್ತಿನಲ್ಲಿ ಓರ್ವ ಪೊಲೀಸ್ ಅಧಿಕಾರಿ ಬಂದು ಅವರನ್ನು ಎಬ್ಬಿಸಿ ಅಲ್ಲಿ ಮಲಗಲು ಅನುಮತಿ ಇಲ್ಲ ಎಂದಿದ್ದರು. ಅದಕ್ಕೆ ಸುರೇಶನ್‌, ತಾನು ಮಾಜಿ ಸೈನಿಕನಾಗಿದ್ದು, ತೀವ್ರ ಅಸ್ವಸ್ಥಗೊಂಡಿದ್ದೇನೆ. ಹಾಗಾಗಿ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ಹೇಳಿ ಮತ್ತೆ ಮಲಗಿದ್ದರು. ಅವರಿಗೆ ಮಲಗಿದಲ್ಲಿಯೇ ನಿದ್ದೆ ಬಂದಿತ್ತು. ಕೆಲ ಹೊತ್ತಿನ ಬಳಿಕ ಪೊಲೀಸ್‌ ಅಧಿಕಾರಿ ಬಂದು ಇಲ್ಲಿ ಯಾರೂ ನಿದ್ರಿಸುವಂತಿಲ್ಲ ಎಂದು ಹೇಳಿ ಮಲಗಿದ್ದ ಸುರೇಶನ್ ಅವರ ಕಾಲಿಗೆ ಲಾಟಿಯಿಂದ ಹೊಡೆದಿದ್ದಾರೆ. ಇದರಿಂದ ತೀವ್ರ ನೋವಿನಿಂದ ಎದ್ದು ನಡೆಯಲಾರದ ಸ್ಥಿತಿಗೆ ತಲುಪಿದ್ದರು.

ರಾತ್ರಿ ವೇಳೆ ಮನೆ ಮಂದಿಗೆ ಸುರೇಶನ್‌ ವಿಷಯ ತಿಳಿಸಿದ್ದು, ಬಳಿಕ ಮನೆಯವರ ಕೋರಿಕೆಯ ಮೇರೆಗೆ ರೈಲು ನಿಲ್ದಾಣದ ಅಧಿಕಾರಿಯೊಬ್ಬರು ಸುರೇಶನ್‌ ಅವರನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮರುದಿನ ಮನೆಯವರು ಬಂದು ಸುರೇಶನ್‌ ಅವರನ್ನು ನಿಲೇಶ್ವರಕ್ಕೆ ಕರೆದೊಯ್ದು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಕಾಲಿನಲ್ಲಿ ಊತ ಬಂದಿದ್ದು, ಕಿಡ್ನಿಗೂ ಅಪಾಯ ಸಾಧ್ಯತೆ ಇದೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರಿಂದ ಪುನ: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಎಡಕಾಲು ಸಂವೇದನೆ ಕಳೆದುಕೊಂಡಿರುವುದರಿಂದ ಫೆಬ್ರವರಿ 11 ರಂದು ಶಸ್ತ್ರ ಚಿಕಿತ್ಸೆಯ ಮೂಲಕ ಕಾಲನ್ನು ಕತ್ತರಿಸಲಾಗಿದೆ. ಇದೀಗ ಒಂದು ಕಾಲನ್ನು ಕಳೆದುಕೊಂಡಿರುವ ಅವರನ್ನು ವಾರ್ಡಿಗೆ ಸ್ಥಳಾಂತರಿಸಿದ್ದು, ಘಟನೆಯ ಬಗ್ಗೆ ಕೆಲವು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸುರೇಶನ್‌ ಮೇಲೆ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಹೊಡೆದು ಗಾಯಗೊಳಿಸಲಾಗಿದೆ ಎಂಬುದಾಗಿ ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಇದೀಗ ಕೇರಳದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಪಿ ವಿ ಸುರೇಶನ್ ಅವರು ಬೆಳಗಾವಿಯ ಸಾಂಬ್ರಾದಲ್ಲಿರುವ ಏರ್‌ಮೆನ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಗ್ರೌಂಡ್ ಟ್ರೈನಿಂಗ್ ಇನ್‌ಸ್ಟ್ರಕ್ಟರ್‌ ಆಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿ 2014 ರಲ್ಲಿ ನಿವೃತ್ತರಾಗಿದ್ದರು.

Continue Reading

DAKSHINA KANNADA

ಸಂಕುಪೂಂಜ – ದೇವುಪೂಂಜ ಜೋಡುಕರೆ ಕಂಬಳ ‘ತಿರುವೈಲೋತ್ಸವ’ಕ್ಕೆ ಅದ್ದೂರಿ ಚಾಲನೆ

Published

on

ಮಂಗಳೂರು : ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ – ದೇವುಪೂಂಜ ಜೋಡುಕರೆ ಕಂಬಳ ಟ್ರಸ್ಟ್‌ನಿಂದ ತುಳುನಾಡಿನ ಕಂಬಳ ತಿರುವೈಲೋತ್ಸವಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಅಮೃತೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆಯನ್ನು ನೆರವೇರಿಸಿದ ಬಳಿಕ ಧಾರ್ಮಿಕ ವಿಧಿವಿಧಾನಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಚೆಂಡೆ ಕೊಂಬು ಕಹಳೆಗಳ ಮೂಲಕ ಕ್ಷೇತ್ರದಲ್ಲಿ ಪೂಜೆ ಮಾಡಿದ ಬಳಿಕ ಮೆರವಣಿಗೆ ಮೂಲಕ ಕಂಬಳದ ಕರೆಗೆ ಆಗಮಿಸಿ ಅಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಯಿತು.

13ನೇ ವರ್ಷದ ತಿರುವೈಲೋತ್ಸವ ಜೋಡುಕರೆ ಉತ್ಸವವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮವನ್ನು  ಜಿ ಆರ್ ಮೇಡಿಕಲ್‌ ಕಾಲೇಜು ಸ್ಥಾಪಕಾಧ್ಯಕ್ಷ ಗಣೇಶ್ ರಾವ್‌ ಉದ್ಘಾಟಿಸಿದರು.

ಇದನ್ನೂ ಓದಿ: ಈ ನಿಂಬೆ ಹಣ್ಣಿಗೆ 6 ಲಕ್ಷ ರೂಪಾಯಿ… ಅಂತಹದ್ದೇನಿದೆ ಇದರಲ್ಲಿ ಗೊತ್ತಾ..?

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಪದ್ಮರಾಜ್‌ ಆರ್‌, ಪನಾಮಾ ಗ್ರೂಪ್‌ ಅಧ್ಯಕ್ಷ ವಿವೇಕ್‌, ತಿರುವೈಲು ಕಂಬಳೋತ್ಸವದ ಅಧ್ಯಕ್ಷ ನವೀನ್‌ಚಂದ್ರ ಆಳ್ವ, ಗೌರವಾಧ್ಯಕ್ಷ ಮಿಥುನ್‌ ರೈ, ಕಾರ್ಯಾಧ್ಯಕ್ಷ ಪ್ರವೀಣ್‌ ಚಂಧ್ರ ಆಳ್ವ , ಸ್ಥಾಪಕಾಧ್ಯಕ್ಷ ನವೀನ್ ಆಳ್ವ ಮೊದಲಾದವರಿದ್ದರು. ಕಂಬಳೋತ್ಸವ ವೀಕ್ಷಣೆಗೆ ಸಾಹಸ್ರಾದೋಪಾದಿಯಲ್ಲಿ ಆಸಕ್ತರು ಆಗಮಿಸಿದ್ದರು.

Continue Reading
Advertisement

Trending

Copyright © 2025 Namma Kudla News

You cannot copy content of this page