ಕ್ವಾರಂಟೈನ್ ವ್ಯವಸ್ಥೆ ನೋಡಿಕೊಳ್ಳಬೇಕಿದ್ದ ಅಧಿಕಾರಿ ಬೇಜವಾಬ್ದಾರಿಯಿಂದ ಬೀದಿಯಲ್ಲಿದ್ದ ಕೊರೊನಾ ಠಾಣೆಗೆ.!
ಬಂಟ್ವಾಳ: ಕ್ವಾರಂಟೈನ್ ಕೇಂದ್ರದ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಅಧಿಕಾರಿಯೋರ್ವರ ಬೇಜವಾಬ್ದಾರಿತನದಿಂದ ಬೀದಿಯಲ್ಲಿದ್ದ ಕೊರೊನಾ,
ವಿಟ್ಲ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಲು ಮೂಲ ಕಾರಣವೆಂಬ ಆರೋಪಗಳು ಇದೀಗ ಕೇಳಿ ಬರುತ್ತಿದೆ.

ಮೇ 15 ರಂದು ಬೆಳಗ್ಗಿನ ಜಾವ ವಿಟ್ಲಕ್ಕೆ ಮಹಾರಾಷ್ಟ್ರದ ರಾಯಗಡದಿಂದ ಆಗಮಿಸಿದ ವ್ಯಕ್ತಿಯನ್ನು ನೇರವಾಗಿ ಕ್ವಾರಂಟೈನ್ ಮಾಡುವ ಬದಲು,
ವಿಟ್ಲದಲ್ಲಿ ಆತನಿಗೆ ಓಡಾಡುವ ಹಾಗೆ ಮಾಡಲಾಗಿದ್ದು, ಇದೇ ವಿಚಾರ ಇದೀಗ ಮುಳುವಾಗಿದೆ.
ಕ್ವಾರಂಟೈನ್ ಗಾಗಿ ನಿಗದಿಪಡಿಸಲಾಗಿದ್ದ ಕೇಂದ್ರದ ಜವಾಬ್ದಾರಿ ಹೊಂದಿರುವ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ.

ಕ್ವಾರೆಂಟೈನ್ ಗಾಗಿ ನಿಗದಿಪಡಿಸಲಾಗಿದ್ದ ಕೇಂದ್ರಕ್ಕೆ ಬೀಗ ಹಾಕಿರುವುದು ಮಾತ್ರವಲ್ಲದೆ, ಸಂಬಂಧಪಟ್ಟ ಅಧಿಕಾರಿಗಳು ದೂರವಾಣಿ ಕರೆಯನ್ನು ಸ್ವೀಕರಿಸದೇ ಕರ್ತವ್ಯ ಲೋಪ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಅನಿವಾರ್ಯ ಸ್ಥಿತಿಯಲ್ಲಿ ಆ ವ್ಯಕ್ತಿ ಪೊಲೀಸ್ ಠಾಣೆಗೆ ಬಂದಿದ್ದು ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿತ್ತು.
ಇದೀಗ ಠಾಣೆಯ ಎಸ್ ಐ ಸಹಿತ 13 ಸಿಬ್ಬಂದಿ ಸೇರಿ ಸಂಪರ್ಕದಲ್ಲಿದ್ದ 20 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ.
ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 42 ವರ್ಷ ವಯಸ್ಸಿನ ಹೆಡ್ ಕಾನ್ ಸ್ಟೇಬಲ್ ಓರ್ವರಿಗೆ ಕೊರೊನಾ ಸೋಂಕು ತಗುಲಿರುವುದು ಮೇ 24ರಂದು ದೃಢಪಟ್ಟಿದೆ.

ಇವರಿಗೆ ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ಕರೋಪಾಡಿಯ ವ್ಯಕ್ತಿಯೋರ್ವರ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ವರದಿಯಾಗಿದ್ದು,
ಠಾಣೆಯ ಹೆಡ್ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಠಾಣಾ ಎಸ್.ಐ.ಸಹಿತ 13 ಮಂದಿ ಸಿಬ್ಬಂದಿ
ಹಾಗೂ ಇವರ ನೇರ ಸಂಪರ್ಕಕ್ಕೆ ಬಂದಿದ್ದ 7 ಮಂದಿ ಸೇರಿ ಒಟ್ಟು 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಠಾಣಾ ಹೆಡ್ ಕಾನ್ ಸ್ಟೇಬಲ್ ಗೆ ಕೊರೊನಾ ಸೋಂಕು ಇರುವುದು ದೃಢಗೊಳ್ಳುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ಅಧಿಕಾರಿಗಳು,
ಅವರ ಸಂಪರ್ಕದಲ್ಲಿದ್ದ ಠಾಣಾ ಎಸ್.ಐ, ಸಿಬ್ಬಂದಿಗಳು ಸೇರಿದಂತೆ ಒಟ್ಟು 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವೇದಾವತಿಯವರ ನೇತೃತ್ವದ ತಂಡ ಠಾಣೆಯ ಎಸ್.ಐ.ಸಹಿತ
13 ಮಂದಿ ಸಿಬ್ಬಂದಿ ಹಾಗೂ ಇವರ ನೇರ ಸಂಪರ್ಕದಲ್ಲಿದ್ದ 7 ಮಂದಿ ಸೇರಿ ಒಟ್ಟು 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಿದೆ.
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ರವರ ಸೂಚನೆ ಮೇರೆಗೆ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ,
ಗ್ರಾಮಕರಣಿಕ ಪ್ರಕಾಶ್, ಸಿಬ್ಬಂದಿ ಚಂದ್ರಶೇಖರ ವರ್ಮರವರ ತಂಡ ಕಾರ್ಯಾಚರಣೆ ನಡೆಸಿದೆ.
ವಿಟ್ಲ ಸಿ.ಪಿ.ಸಿ.ಆರ್.ಐ.ನಲ್ಲಿರುವ ಅತಿಥಿ ಗೃಹ, ಪೊಲೀಸ್ ವಸತಿ ಸಮುಚ್ಚಯ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸರನ್ನು ಹಾಗೂ ಅವರ ನೇರ ಸಂಪರ್ಕಕ್ಕೆ ಬಂದವರನ್ನು ನಿಗಾದಲ್ಲಿ ಇಡಲಾಗುತ್ತಿದೆ.
ಹೊಸ ಮಾರ್ಗ ಸೂಚಿಯಂತೆ ವಿಟ್ಲ ಸೀಲ್ ಡೌನ್ ಮಾಡುತ್ತಿಲ್ಲ ಎಂದು ವರದಿಯಾಗಿದೆ.
ಮೇ 21 ರಂದು ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಸಮೀಪ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಠಾಣಾ ಎಸ್.ಐ.ಯವರ ನೇತೃತ್ವದ ತಂಡ ದಾಳಿ ನಡೆಸಿತ್ತು.
ಈ ದಾಳಿಯ ತಂಡದಲ್ಲಿ ಇದೀಗ ಕೊರೊನಾ ಪಾಸಿಟೀವ್ ಆಗಿರುವ ಹೆಡ್ ಕಾನ್ ಸ್ಟೇಬಲ್ ಕೂಡ ಭಾಗಿಯಾಗಿದ್ದರು.
ಈ ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಪೊಲೀಸರ ಜೊತೆಗೆ ತಾಲೂಕು ಮಟ್ಟದ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ಬಳಿಕ ವಿಟ್ಲ ಠಾಣೆಗೆ ತನಿಖೆಗಾಗಿ ಜಿಲ್ಲಾಮಟ್ಟದ ಉನ್ನತ ಪೊಲೀಸ್ ಅಧಿಕಾರಿಗಳೂ ಆಗಮಿಸಿದ್ದರು.
ಈ ವೇಳೆ ಸಿಬ್ಬಂದಿ ಅಧಿಕಾರಿಗಳ ಸಹಿತ ಸಾರ್ವಜನಿಕವಾಗಿ ಹಲವರೊಂದಿಗೆ ಬೆರೆತಿರುವುದಾಗಿ ಹೇಳಲಾಗಿದೆ.
ಈ ಹಿನ್ನಲೆಯಲ್ಲಿ ಕೊರೊನಾ ಸೋಂಕಿತ ಸಿಬ್ಬಂದಿಯ ಟ್ರಾವೆಲಿಂಗ್ ಹಿಸ್ಟರಿ ಎಲ್ಲರಲ್ಲೂ ಆತಂಕಕ್ಕೂ ಕಾರಣವಾಗಿದೆ.
ಕೊರೊನಾ ಸೋಂಕು ದೃಢಪಟ್ಟ ಹೆಡ್ ಕಾನ್ ಸ್ಟೇಬಲ್ ಯಾರೊಂದಿಗೆ ಪ್ರಾಥಮಿಕ ಸಂಪರ್ಕವನ್ನು ಹೊಂದಿದ್ದಾರೆ ಅನ್ನೋ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ವಿಟ್ಲ ಠಾಣಾ ಎಸ್.ಐ. ಸಹಿತ ಠಾಣೆಯ ಸಿಬ್ಬಂದಿಗಳನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಇನ್ನು ಪೊಲೀಸ್ ಠಾಣೆಗೆ ಬಂದು ಹೋಗಿರುವವರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.
ಹೆಡ್ ಕಾನ್ ಸ್ಟೇಬಲ್ ಅವರು ಸಾರ್ವಜನಿಕರ ಜೊತೆಗೆ ನೇರ ಸಂಪರ್ಕವನ್ನು ಹೊಂದಿರುವ ಸಾಧ್ಯತೆಯಿದ್ದು, ವಿಟ್ಲ ಸುತ್ತಮುತ್ತಲ ಪ್ರದೇಶದ ಜನರಿಗೆ ಕೊರೊನಾ ಆತಂಕ ಶುರುವಾಗಿದೆ.
ಠಾಣಾ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯನ್ನು ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿಯವರ ನೇತೃತ್ವದ ತಂಡ ಸ್ಯಾನಿಟೈಸ್ ಮಾಡಿದೆ.
ಮುಂದಿನ 48 ಗಂಟೆಗಳ ಕಾಲ ಪೊಲೀಸ್ ಠಾಣೆಯನ್ನು ಮುಚ್ಚಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಪಕ್ಕದ ಕೊಠಡಿಯೊಂದರಲ್ಲಿ ಕೆಲಸ ಕಾರ್ಯಗಳು ನಡೆಯಲಿದ್ದು, ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಠಾಣಾ ಎಸ್.ಐ. ಸೇರಿ 12 ಮಂದಿ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಕ್ವಾರಂಟೈನ್ ನಲ್ಲಿರುವ ಸಿಬ್ಬಂದಿಗಳು ಮರಳಿ ಬರುವ ತನಕ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ಸಂಚಾರಿ ಠಾಣಾ ಪೊಲೀಸರು ವಿಟ್ಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.