ಕೊರೊನಾದಿಂದ ತತ್ತರಿಸಿದ ದೇಶಕ್ಕೆ ಪ್ರಧಾನಿ ನೀಡಿದ ಬಂಪರ್ ಬಹುಮಾನ.!
ನವದೆಹಲಿ: ಕೋವಿಡ್-19 ಪಿಡುಗಿನಿಂದ ತತ್ತರಿಸಿರುವ ಭಾರತದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವಂತಹ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪ್ರಕಟಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ ಈವರೆಗೆ ಪ್ರಕಟಿಸಿರುವ ಉಪಕ್ರಮಗಳು ಸೇರಿ ಸುಮಾರು ರೂ.20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್ ನೀಡಲಾಗುವುದು.
ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ.10 ರಷ್ಟಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಹಿಂದೆಂದೂ ಇಲ್ಲದಂತಹ ಬಿಕ್ಕಟ್ಟನ್ನು ಈಗ ಭಾರತವು ಎದುರಿಸುತ್ತಿದೆ. ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಭಾರತವು ದಣಿಯುವುದಿಲ್ಲ ಅಥವಾ ಕೈ ಚೆಲ್ಲೋದಿಲ್ಲ.
ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕು ಮಾತ್ರವಲ್ಲ ಮುಂದಕ್ಕೂ ಸಾಗಬೇಕು ಎಂದು ದೇಶವನ್ನು ಉದ್ದೇಶಿಸಿ ಮಂಗಳವಾರ (ಮೇ 12) ರಾತ್ರಿ ಎಂಟು ಗಂಟೆಗೆ ಮಾಡಿದ ಭಾಷಣದಲ್ಲಿ ಪ್ರಧಾನಿ ಹೇಳಿದ್ದಾರೆ.
ದೊಡ್ಡ ಮಟ್ಟದ ಆರ್ಥಿಕ ಸುಧಾರಣಾ ಕ್ರಮಗಳೂ ಜಾರಿಯಾಗಲಿವೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.
ಈಗಿನ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಮಾನವ ಕುಲದ ಪ್ರಗತಿಗೆ ಭಾರತವು ಬಹುದೊಡ್ಡ ಕೊಡುಗೆ ನೀಡಬೇಕು ಎಂದು ಇಡೀ ಜಗತ್ತು ಬಯಸುತ್ತಿದೆ.

ಆದರೆ, ಹೇಗೆ ಎಂಬ ಪ್ರಶ್ನೆ ನಮ್ಮ ಮುಂದೆ ಇದೆ. 130 ಕೋಟಿ ಭಾರತೀಯರು ದೇಶವನ್ನು ಸ್ವಾವಲಂಬಿಯಾಗಿಸುವ ಮೂಲಕ ಇದು ಸಾಧ್ಯ.
ನಮ್ಮಲ್ಲಿ ಸಂಪನ್ಮೂಲ, ಸಾಮರ್ಥ್ಯ, ಜಗತ್ತಿನ ಅತ್ಯುತ್ತಮ ಪ್ರತಿಭೆ ಎಲ್ಲವೂ ಇವೆ. ಅತ್ಯುತ್ತಮ ವಸ್ತುಗಳನ್ನು ನಾವು ತಯಾರಿಸಬೇಕು.
ನಮ್ಮ ಪೂರೈಕೆ ವ್ಯವಸ್ಥೆಯನ್ನು ಆಧುನಿಕಗೊಳಿಸಿ ಸರಪಣಿಯನ್ನು ಉತ್ತಮಪಡಿಸಬೇಕು. ನಮಗಿದು ಸಾಧ್ಯ, ನಾವಿದನ್ನು ಮಾಡಿಯೇ ತೀರುತ್ತೇವೆ’ ಎಂಬ ಆಶಾಭಾವವನ್ನು ಮೋದಿ ವ್ಯಕ್ತಪಡಿಸಿದ್ದಾರೆ.
ಈಗ ನಮ್ಮ ಮುಂದೆ ಇರುವ ದುರಂತವು ಒಂದು ಸೂಚನೆಯನ್ನು, ಒಂದು ಸಂದೇಶವನ್ನು, ಒಂದು ಅವಕಾಶವನ್ನು ಕೊಟ್ಟಿದೆ.
ಕೊರೊನಾ ವೈರಾಣು ಸಮಸ್ಯೆ ಆರಂಭವಾದ ಹೊತ್ತಿನಲ್ಲಿ ಭಾರತವು ವೈಯಕ್ತಿಕ ಸುರಕ್ಷತಾ ಕಿಟ್ಗಳನ್ನು (ಪಿಪಿಇ) ತಯಾರಿಸುತ್ತಿರಲಿಲ್ಲ.
ಎನ್-95 ಮಾಸ್ಕ್ಗಳ ತಯಾರಿಕೆ ನಗಣ್ಯವಾಗಿತ್ತು. ಆದರೆ, ಈಗ ಪ್ರತಿದಿನ ಎರಡು ಲಕ್ಷ ಪಿಪಿಇ ಕಿಟ್ಗಳು ಮತ್ತು ಎರಡು ಲಕ್ಷ ಎನ್-95 ಮಾಸ್ಕ್ಗಳನ್ನು ತಯಾರಿಸುತ್ತಿದೆ ಎಂದವರು ನುಡಿದರು.
ಒಂದು ವೈರಸ್ ಜಗತ್ತನ್ನು ವಿನಾಶದತ್ತ ತಳ್ಳಿದೆ. ಜೀವ ಉಳಿಸಿಕೊಳ್ಳುವುದಕ್ಕಾಗಿ ಇಡೀ ಜಗತ್ತು ಯುದ್ಧದಲ್ಲಿ ತೊಡಗಿದೆ.
ಇಂತಹ ಸಮಸ್ಯೆಯನ್ನು ನಾವು ಹಿಂದೆಂದೂ ನೋಡಿರಲಿಲ್ಲ, ಕೇಳಿರಲಿಲ್ಲ. ಭಾರತವು ಸ್ವಾವಲಂಬಿಯಾಗಬೇಕಾದ ಮಹತ್ವವನ್ನು ಈ ಬಿಕ್ಕಟ್ಟು ತೋರಿಸಿಕೊಟ್ಟಿದೆ. ಅದೊಂದೇ ದೇಶದ ಮುಂದಿರುವ ದಾರಿ ಎಂದು ಪ್ರಧಾನಿ ವಿವರಿಸಿದ್ದಾರೆ.
ಪ್ಯಾಕೇಜ್ ಯಾರಿಗೆ.??:
ಕಾರ್ಮಿಕರು, ರೈತರು, ಪ್ರಾಮಾಣಿಕ ತೆರಿಗೆ ಪಾವತಿದಾರರು, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳಲ್ಲಿ ತೊಡಗಿರುವ ಎಲ್ಲರಿಗೂ ಈ ಪ್ಯಾಕೇಜ್ನಲ್ಲಿ ಪಾಲು ಇದೆ ಎಂದು ಪ್ರಧಾನಿ ಹೇಳಿದ್ದಾರೆ.
ಲಾಕ್ಡೌನ್ 4.0 ಆರಂಭ.??:
ದೇಶವ್ಯಾಪಿ ಹೇರಲಾಗಿರುವ ಲಾಕ್ ಡೌನ್ ನ ಮೂರನೇ ವಿಸ್ತರಣೆಯು ಇದೇ 17ಕ್ಕೆ ಕೊನೆಯಾಗಲಿದೆ. ಆದರೆ ನಾಲ್ಕನೇ ಹಂತದ ದಿಗ್ಬಂಧನ ಆರಂಭವಾಗಲಿದೆ.
ಈ ಹಂತದ ನಿರ್ಬಂಧಗಳು ಹಿಂದಿನ ಅವಧಿಗಳಿಗಿಂತ ಭಿನ್ನವಾಗಿರಲಿವೆ. ಈ ಬಗೆಗಿನ ಮಾಹಿತಿಯನ್ನು ಇದೇ 18ರೊಳಗೆ ಜನರಿಗೆ ನೀಡಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.
ರಾಜ್ಯಗಳು ನೀಡಿದ ಸಲಹೆಗಳ ಆಧಾರದಲ್ಲಿ ನಾಲ್ಕನೇ ಹಂತದ ಲಾಕ್ಡೌನ್ನ ನಿಯಮಗಳು ರೂಪುಗೊಳ್ಳಲಿವೆ
ಕೊರೊನಾ ವೈರಾಣು ಬಹು ದೀರ್ಘ ಕಾಲದವರೆಗೆ ನಮ್ಮ ಜೊತೆಗೆ ಇರಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಆದರೆ, ನಮ್ಮ ಜೀವನವು ಕೊರೊನಾ ಸುತ್ತಲೇ ಗಿರಕಿ ಹೊಡೆಯಲು ಬಿಡಬಾರದು. ಮಾಸ್ಕ್ ಧರಿಸೋಣ, ಅಂತರ ಕಾಯ್ದುಕೊಳ್ಳೋಣ, ಈ ಸೋಂಕು ನಮ್ಮನ್ನು ಬಾಧಿಸದಂತೆ ನೋಡಿಕೊಳ್ಳೋಣ ಎಂದು ಮೋದಿ ಕರೆ ಕೊಟ್ಟಿದ್ದಾರೆ.
ಲಾಕ್ಡೌನ್ ತೆರವಿಗೆ ಒತ್ತಡ:
ದೇಶವ್ಯಾಪಿ ಇರುವ ಲಾಕ್ಡೌನ್ ಅನ್ನು ತೆರವು ಮಾಡಬೇಕು ಎಂದು ಕೈಗಾರಿಕಾ ವಲಯದ ಪ್ರಮುಖರು, ಕಾರ್ಮಿಕರು ಮತ್ತು ರಾಜಕೀಯ ಮುಖಂಡರು ಒತ್ತಡ ಹೇರುತ್ತಿದ್ದಾರೆ.
ದಿಗ್ಬಂಧನ ಮುಂದುವರಿದರೆ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಆಗಲಿದೆ ಮತ್ತು ಜನರು ಜೀವನೋಪಾಯ ಕಳೆದುಕೊಳ್ಳಲಿದ್ದಾರೆ ಎಂಬುದು ಈ ಗುಂಪಿನ ವಾದ.
ಪ್ರಧಾನಿಯವರು ಮುಖ್ಯಮಂತ್ರಿಗಳ ಜೊತೆಗೆ ಸೋಮವಾರ (ಮೇ 11) ವಿಡಿಯೋ ಸಂವಾದ ನಡೆಸಿದ್ದರು. ಸುಮಾರು ಆರು ತಾಸುಗಳ ಕಾಲ ಈ ಸಂವಾದ ನಡೆದಿತ್ತು.
ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ಮುಂದುವರಿಸಬೇಕು ಎಂದು ಪ್ರಧಾನಿಯನ್ನು ಕೋರಿದ್ದರು.
ಆದರೆ, ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಆರ್ಥಿಕ ಚಟುವಟಿಕೆ ಆರಂಭಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಬೇಕು ಎಂದು ಒತ್ತಾಯಿಸಿದ್ದರು.
ಸಣ್ಣ ಮತ್ತು ಉದ್ಯಮ ವಲಯಕ್ಕೆ 5.91 ಲಕ್ಷ ಕೋಟಿ ರೂಪಾಯಿ ಸಾಲ:
ಇನ್ನು ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು 5.95 ಲಕ್ಷ ಕೋಟಿ ರೂ ಸಾಲ ಮಂಜೂರು ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಾರ್ಚ್ 1 ರಿಂದ ಮೇ 8ರ ವರೆಗೆ ಕಂಪೆನಿ ಕಾಯ್ದೆಯಡಿ ನೋಂದಣಿಯಾಗಿರುವ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಸಹ 1.18 ಲಕ್ಷ ಕೋಟಿ ರೂಪಾಯಿ ಸಾಲ ಒದಗಿಸಿವೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಿರ್ಮಲಾ ಸೀತಾರಾಮನ್, ಶೇ 97 ರಷ್ಟು ಅರ್ಹ ಸಾಲಗಾರರಿಗೆ 65 ಸಾವಿರದ 879 ಕೋಟಿ ರೂಪಾಯಿ ಮೊತ್ತದ ತುರ್ತು ಸಾಲ ಮತ್ತು ದುಡಿಯುವ ಬಂಡವಾಳ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಕೇಂದ್ರ ಹಣಕಾಸು ಸಚಿವಾಲಯ 14 ರಾಜ್ಯಗಳಿಗೆ 15ನೇ ಹಣಕಾಸು ಆಯೋಗದಡಿ 6 ಸಾವಿರದ 195 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಕುರಿತು ಇಂದು ಸಂಜೆ 4 ಗಂಟೆಗೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಲಿದ್ದಾರೆ.
ಜೊತೆಗೆ ಲಾಕ್ ಡೌನ್ 4.0 ವಿಸ್ತರಣೆಯ ಬಗ್ಗೆ ವಿವರಣೆ ನೀಡಲಿದ್ದಾರೆ ಎನ್ನಲಾಗಿದೆ.