ಪಚ್ಚನಾಡಿಯ ತ್ಯಾಜ್ಯ ಸಮಸ್ಯೆಯಿಂದ ಮುಕ್ತಿ ಕೊಡಿ :
ಮಂಗಳೂರು: ಪಚ್ಚನಾಡಿಯ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಲು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪಚ್ಚನಾಡಿಯನ್ನು ವಾಸಯೋಗ್ಯ ಪ್ರದೇಶವನ್ನಾಗಿ ಮಾಡಲು, ಪ್ರಧಾನಿಯವರ ಕನಸಾದ ಸ್ಮಾರ್ಟ್ ಸಿಟಿ ಯೋಜನೆಯ ನಿಜವಾದ ಅನುಷ್ಠಾನ ಆಗುವಂತೆ ಮಾಡುವ ಮೂಲಕ ಪಚ್ಚನಾಡಿಯನ್ನು ಶೂನ್ಯ ತ್ಯಾಜ್ಯ ವಲಯವನ್ನಾಗಿ ಮಾಡಲು ಪಣತೊಟ್ಟು ಇಂದು ಪಚ್ಚನಾಡಿಯ ಮತ್ತು ತ್ಯಾಜ್ಯ ಘಟಕದಿಂದ ಬಾಧಿತವಾಗಿರುವ ಪ್ರದೇಶದ ಅನೇಕ ಪ್ರಮುಖರು ಪಚ್ಚನಾಡಿಯ ದೇವಿನಗರದ ಮೈದಾನದ ಸಭಾಂಗಣದಲ್ಲಿ ಸೇರಿದರು.

ಈ ಸಭೆಯಲ್ಲಿ ತ್ಯಾಜ್ಯ ನಿರ್ವಹಣೆ ಘಟಕದ ವೈಫಲ್ಯತೆ, ಅದರಿಂದ ಜನರಿಗಾಗುವಂತಹ ತೊಂದರೆ, ಪರಿಸರ ಮತ್ತು ಜೀವನದಿ ಫಾಲ್ಗುಣಿಗಾಗುವಂತಹ ಮಲಿನತೆ ಬಗ್ಗೆ ಜನರಿಗೆ ಮನದಟ್ಟು ಮಾಡಲಾಯಿತು. ಮತ್ತು ಒಂದು ಸಂಚಾಲನ ಸಮಿತಿ ರಚಿಸಿ, ಸಮಿತಿಯಲ್ಲಿ ಎಲ್ಲಾ ಬಾಧಿತ ಪ್ರದೇಶದ ಪ್ರಮುಖರನ್ನು ಸ್ವಯಂ ಪ್ರೇರಿತ ಸಂಚಾಲಕರಾಗಿ ನೇಮಿಸಿ ಸಾಮೂಹಿಕ ನೇತೃತ್ವ ಮುಂದಾಳತ್ವವನ್ನು ಎಂ ಜಿ ಹೆಗಡೆ ವಹಿಸಿಕೊಂಡರು. ಬಾಧಿತ ಪ್ರದೇಶದ ಇನ್ನು ಅನೇಕರನ್ನು ಮುಂದೆ ಸೇರಿಸಲಾಗುವುದೆಂದು ತೀರ್ಮಾನಿಸಲಾಯಿತು.

ವರದಿಯನ್ನು ಜಿಲ್ಲಾಧಿಕಾರಿ, ಆಯುಕ್ತರಿಗೆ ಈಗಾಗಲೇ ನೀಡಲಾಗಿದ್ದು ಇಂದಿನ ಸರಕಾರ ಮತ್ತು ಅಧಿಕಾರಿಗಳು ನಮ್ಮ ಕೂಗಿಗೆ ಮನ್ನಣೆ ಕೊಡುವರೆಂಬ ಭರವಸೆ ಇಟ್ಟು ಮನವಿ ಕೊಡುವುದಾಗಿ ತೀರ್ಮಾನಿಸಲಾಯಿತು ಈ ಬಾರಿಯಾದರೂ ಪಚ್ಚನಾಡಿ ಸ್ವಚ್ಛ ನಗರ ಪ್ರದೇಶವಾಗಿ ಮಾರ್ಪಾಡಾಗುತ್ತದೆ ಎನ್ನುವ ಆಶಾಭಾವನೆಯಿಂದ ನಮ್ಮ ಮನವಿಯನ್ನು ಸ್ಥಳೀಯ ಜನಪ್ರತಿನಿಧಿ, ಮಾನ್ಯ ಶಾಸಕರು, ಸಂಸದರು, ಉಸ್ತುವಾರಿ ಮಂತ್ರಿಗಳು, ಮಾನ್ಯ ಮುಖ್ಯ ಮಂತ್ರಿಗಳು, ಘನತೆವೆತ್ತ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಪ್ರಥಮ ಪ್ರಜೆ ಘನತೆವೆತ್ತ ರಾಷ್ಟ್ರಪತಿಗಳಿಗೆ ಮತ್ತು ಮಾಧ್ಯಮಗಳಿಗೆ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಇದು ಯಾವುದೇ ವ್ಯಕ್ತಿ, ಸಂಸ್ಥೆ, ಧರ್ಮ ಹಾಗೂ ಪಕ್ಷದ ವಿರೋಧವಾಗಿರದೆ ಕೇವಲ ಪಚ್ಚನಾಡಿಯನ್ನು ದೇಶದ ಉಳಿದ ನಗರಗಳಂತೆ ಶೂನ್ಯ ತ್ಯಾಜ್ಯ ನಗರವನ್ನಾಗಿಸುವಲ್ಲಿ ನಮ್ಮ ಹೋರಾಟ ಎಂದು ಎಲ್ಲರೂ ಧ್ವನಿಗೂಡಿಸಿದರು. ಡಾ ರೀಟಾ ನೊರೋನ್ಹಾ ಈ ಸಭೆಯನ್ನು ಉದ್ದೇಶಿಸಿ ನಾಲ್ಕು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ನಡೆಸಿದ ಸರ್ವೆಯ ರಿಪೋರ್ಟ್ ನ ಆಧಾರದಲ್ಲಿ ಪಚ್ಚನಾಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಸುಮಾರು 40% ಜನರು ಅಸ್ತಮಾದಿಂದ ಉಸಿರಾಟದ ತೊoದರೆ ಬಳಲುತ್ತಿದ್ದಾರೆ. ಇಲ್ಲಿ ಸುರಿಯುತ್ತಿರುವ ರಾಸಾಯನಿಕದಿಂದಾಗಿ ಬಹಳಷ್ಟು ಜನ ಕ್ಯಾನ್ಸರ್ ಪೀಡಿತರಾಗಿದ್ದಾರೆ. ಬಹಳಷ್ಟು ಜನರಿಗೆ ಚರ್ಮರೋಗದ ವ್ಯಾಧಿ ಇದೆ. ಅದಕ್ಕಾಗಿ ಆರೋಗ್ಯಯುಕ್ತ ಸಮಾಜಕ್ಕಾಗಿ ಸೇರಿರುವ ಎಲ್ಲರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದರು.

ಸಮಿತಿಯ ಸಂಚಾಲಕರಾಗಿ ಆಯ್ಕೆಗೊಂಡ ಎಮ್ ಜಿ ಹೆಗಡೆ ಮಾತನಾಡಿ ಕಸದಿಂದ ರಸವೆಂಬ ನಾಣ್ಣುಡಿಯಂತೆ ಜನ ರೋಗ ಪೀಡಿತರಾದರೂ ಪರವಾಗಿಲ್ಲ ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಕಸದಿಂದ ರಸ ಹೀರುತ್ತಿದ್ದಾರೆ ಎಂದು ನುಡಿದರು. ಕಸ ವಿಲೇವಾರಿಯಲ್ಲಿ ಜನರು ಕೂಡ ಜಾಗ್ರತರಾಗಿ ನಮ್ಮ ನಮ್ಮ ಮನೆಯಲ್ಲಿಯ ಕಸವನ್ನು ವಿಂಗಡಿಸಿ ಹಸಿ ತ್ಯಾಜ್ಯವನ್ನು ಮಣ್ಣಿನೊಂದಿಗೆ ಬೆರೆಸಿ ಮನೆಯ ಕೈತೋಟದ ಗಿಡಗಳಿಗೆ ಗೊಬ್ಬರವಾಗಿ ಬಳಸುವ ಮೂಲಕ ಸಾವಯವ ಗೊಬ್ಬರಕ್ಕೆ ಉತ್ತೇಜನ ಕೊಡುವ ಜೊತೆಗೆ ರಾಸಾಯನಿಕ ಗೊಬ್ಬರವನ್ನು ಕಡಿಮೆ ಮಾಡಬಹುದು ಎಂದರು. ಮನೆಮನೆಯಲ್ಲಿ ವಿಂಗಡಿಸಿದ ಕಸಗಳಲ್ಲಿ ಪೇಪರ್ ಒಣಗಿದ ಎಲೆ ಮುಂತಾದ ಉರಿಯುವ ವಸ್ತುಗಳನ್ನು ನಮ್ಮ ನಮ್ಮ ಮನೆಯಲ್ಲಿ ಉರಿಸಿ ಬಿಸಿನೀರು ಕಾಯಿಸಬಹುದು ಎಂದರು. ಉಳಿದ ಗಾಜಿನ, ಕಬ್ಬಿಣದ ಚೂರುಗಳನ್ನು ಗುಜಿರಿಗೆ ನೀಡುವ ಮೂಲಕ ನಮ್ಮ ಮನೆಯಲ್ಲೇ ವಿಲೇವಾರಿ ಮಾಡಬಹುದು ಎಂದರು. ಈ ಮೂಲಕ ಬುದ್ದಿವಂತರ ಜಿಲ್ಲೆಯ ಜನರು ಈ ಮೂಲಕ ಬುದ್ದಿವಂತರಾಗಬಹುದು ಎಂದು ನುಡಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ ಅವರ ಮನೆಯ ಪಕ್ಕದ ರಸ್ತೆಯ ಕಾಂಕ್ರೀಟೀಕರಣವು ಎರಡೂವರೆ ಲಕ್ಷ ವಿನಿಯೋಗಿಸಿ ಐದು ಲಕ್ಷ ಬಿಲ್ ಮಾಡಿರುವ ಬಗ್ಗೆ ಗುತ್ತಿಗೆದಾರರು ನೀಡಿರುವ ಮಾಹಿತಿ ಪ್ರಸ್ತಾಪಿಸಿ ಭ್ರಷ್ಟಾಚಾರದ ವಿರುದ್ಧ ಜನರು ಹದ್ದಿನ ಕಣ್ಣಿಡುವ ಮೂಲಕ ತಮ್ಮ ತಮ್ಮ ತೆರಿಗೆಯ ಹಣವನ್ನು ಪೋಲಾಗದಂತೆ ನಿಗಾವಹಿಸಬೇಕು ಎಂದರು. ತ್ಯಾಜ್ಯ ಘಟಕವು ಎತ್ತರ ಪ್ರದೇಶದಲ್ಲಿದ್ದು ಮಳೆಗಾಲದಲ್ಲಿ ಕೊಳಚೆ ನೀರು ತಗ್ಗು ಪ್ರದೇಶಗಳಿಗೆ ಹರಿದು ಮುಂದಿನ ಕೆಲವೇ ವರ್ಷಗಳಲ್ಲಿ ಜಿಲ್ಲೆಯಾದ್ಯಂತ ಬಾವಿಗಳು ಉಪಯೋಗಿಸದ ಸ್ಥಿತಿಗೆ ಬರಬಹುದು ಎಂದರು.
ಇವತ್ತು ಪಚ್ಚನಾಡಿ ಹಾಗೂ ಆಸುಪಾಸಿನ ಬಹಳಷ್ಟು ಪ್ರಮುಖರು ಸೇರಿದ್ದೀರಿ, ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಜನ ರಸ್ತೆಗಿಳಿಯುವ ಸಂದರ್ಭ ಬಂದರೆ ನಾವೆಲ್ಲರೂ ಸೇರಿ ಜನರನ್ನು ಅಣಿಗೊಳಿಸೋಣ ಎಂದರು. ಪ್ರಮುಖ ಸಮಾಜಸೇವಕರು ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ ಎಪ್ಪತ್ತರ ಹರೆಯದಲ್ಲೂ ಯುವಕಯುವತಿಯರನ್ನು ನಾಚಿಸುವಂತೆ ಈ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಡಾ ರೀಟಾ ನೊರೊನ್ಹಾನವರನ್ನು ಅಭಿನಂದಿಸುತ್ತಾ ಸೇರಿರುವ ನಾವೆಲ್ಲರೂ ಈ ಸಮಿತಿಯ ಆಧಾರ ಸ್ಥoಬಗಳಾಗಿರುತ್ತೇವೆ ಎಂದರು.
ಮನವಿಯಲ್ಲಿರುವ ಬೇಡಿಕೆಗಳು:
1. ಈಗಿರುವ ತ್ಯಾಜ್ಯವನ್ನು ಆಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸಿ ಶೂನ್ಯ ತ್ಯಾಜ್ಯವನ್ನಾಗಿಸುವುದು.
2. ಇನ್ನುಮುಂದೆ ದಿನದಿನದ ತ್ಯಾಜ್ಯವನ್ನು ಆಯಾಯ ದಿನವೇ ವಿಲೇವಾರಿ ಮಾಡುವುದು
3. ತ್ಯಾಜ್ಯ ಘಟಕದ ನಿರ್ವಹಣಾ ಮೇಲುಸ್ತವಾರಿಯಲ್ಲಿ ಸಮಿತಿಯ ಕೆಲವರನ್ನು ನೇಮಿಸುವುದು
4. ಡಂಪಿಂಗ್ ಯಾರ್ಡ್ ಇರುವ ಜಾಗದಲ್ಲಿ ಹಸಿರು ಉದ್ಯಾನವನ ನಿರ್ಮಿಸಿ ಸ್ಥಳೀಯರಿಗೆ ಉದ್ಯೋಗ ನೀಡುವುದು.
5. ಕಳೆದ ಬಾರಿಯ ಸಂತ್ರಸ್ತರಿಗೆ ಸರಿಯಾದ ಪರಿಹಾರವನ್ನು ವಿತರಿಸುವುದು.
6. ಸ್ವಚ್ಚ ಭಾರತ ಯೋಜನೆಯ ಪ್ರಕಾರ ಆಯಾಯ ವಾರ್ಡುಗಳಲ್ಲಿ ತ್ಯಾಜ್ಯವಿಲೇವಾರಿ ಘಟಕವನ್ನು ನಿರ್ಮಿಸುವುದು. ಮನವಿಯ ಈ ಎಲ್ಲಾ ಬೇಡಿಕೆಗಳಿಗೆ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಾರೆ ಎನ್ನುವ ಭರವಸೆಯೊಂದಿಗೆ ವಂದಿಸುತ್ತಾ ಈ ಸಂದೇಶವನ್ನು ಜಿಲ್ಲೆಯ ಎಲ್ಲಾ ಸಾಮಾಜಿಕ ಕಳಕಳಿ ಇರುವ ಕಾರ್ಯಕರ್ತರು ಪರಸ್ಪರ ಹಂಚಿಕೊಳ್ಳಬೇಕಾಗಿ ವಿನಂತಿ.