ಬಂಟ್ವಾಳ: ಸಮಾಜದಲ್ಲಿ ಯಾರಿಗೂ ಬೇಡವಾಗಿ ಅನಾಥವಾಗಿರುವ ಹೆಣ್ಣು ಮಕ್ಕಳು-ಮಹಿಳೆಯರಿಗೆ ಆಶ್ರಯ ಕಲ್ಪಿಸುವ ದೃಷ್ಟಿಯಿಂದ ಪಾಣೆಮಂಗಳೂರಿನ ಮಹಿಳೆಯೊಬ್ಬರು ಉಚಿತವಾಗಿ ಆಶ್ರಮ ನಿರ್ಮಾಣಕ್ಕೆ ಮುಂದಾಗಿದ್ದು, ನರಿಕೊಂಬು ರಸ್ತೆಯ ಮೊಗರ್ನಾಡಿನಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಆಶ್ರಮಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.

ಪಾಣೆಮಂಗಳೂರಿನ ಕುಮುದಾ ಜೆ.ಕುಡ್ವ ಅವರೇ ಆಶ್ರಮ ನಿರ್ಮಾಣಕ್ಕೆ ಮುಂದಾಗಿರುವ ಮಹಿಳೆಯಾಗಿದ್ದು, ಸುಮಾರು 10 ವರ್ಷಗಳ ಹಿಂದೆಯೇ ಆಶ್ರಮ ನಿರ್ಮಾಣ ಮಾಡಬೇಕು ಎಂಬ ಇಚ್ಛೆಯೊಂದಿಗೆ 2011ರಲ್ಲಿ ಜೆ.ಕೆ.ಸೇವಾ ಟ್ರಸ್ಟ್ ಸ್ಥಾಪಿಸಿದ್ದರು.

ಆದರೆ ಹಲವು ಕಾರಣಕ್ಕೆ ಆಶ್ರಮ ನಿರ್ಮಾಣ ಸಾಧ್ಯವಾಗಿರಲಿಲ್ಲ. ಪ್ರಸ್ತುತ ಆರಂಭಿಸುವ ಆಶ್ರಮದಲ್ಲಿ ಗರಿಷ್ಠ ಅಂದರೆ 100 ಮಂದಿಗೆ ಅವಕಾಶ ನೀಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ.

ಆದರೆ ಇದೀಗ ಮೊಗರ್ನಾಡಿನಲ್ಲಿ ತಮ್ಮ 53ಸೆಂಟ್ಸ್ ಜಮೀನಿನಲ್ಲಿ ಆಶ್ರಮಕ್ಕಾಗಿ ಸುಸಜ್ಜಿತ ವಸತಿ ವ್ಯವಸ್ಥೆ, ಶೌಚಾಲಯ, ನೀರು, ವಿದ್ಯುತ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಜೂನ್ ತಿಂಗಳಲ್ಲಿ ಆಶ್ರಮ ಆರಂಭಿಸುವ ಕುರಿತು ಸಿದ್ಧತೆ ನಡೆಸಿದ್ದಾರೆ. ಆ ಜಮೀನಿನಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವೊಂದನ್ನು ಆಶ್ರಮಕ್ಕೆ ಹೊಂದಿಕೊಳ್ಳುವ ರೀತಿ ನವೀಕರಣಗೊಳಿಸಿದ್ದಾರೆ.

ಕುಮುದಾ ಜೆ.ಕುಡ್ವ ಅವರು ಪಾಣೆಮಂಗಳೂರಿನ ಕೇಂದ್ರ ಭಾಗದಲ್ಲಿ ವಾಣಿಜ್ಯ ಸಂಕೀರ್ಣವೊಂದನ್ನು ಹೊಂದಿದ್ದು, ಅದರ ಬಾಡಿಗೆ ಮೊತ್ತದಿಂದಲೇ ಆಶ್ರಮ ನಡೆಸುವುದಾಗಿ ತಿಳಿಸಿದ್ದಾರೆ.
ಅಂದರೆ ಕುಮುದಾ ಜೆ.ಕುಡ್ವ ಅವರ ಇಬ್ಬರು ಮಕ್ಕಳು ಹೊರಗಿದ್ದು, ಪ್ರಸ್ತುತ ಅವರು ಮನೆಯಲ್ಲೇ ಒಬ್ಬರೇ ವಾಸಿಸುತ್ತಿದ್ದಾರೆ. ಮುಂದೆ ಆಶ್ರಮ ಆರಂಭವಾದ ಬಳಿಕ ಅವರು ಕೂಡ ಅದೇ ಆಶ್ರಮದಲ್ಲಿ ಉಳಿದುಕೊಳ್ಳುವ ಹಾಗೆ ಪ್ರತ್ಯೇಕ ಕೊಠಡಿಯೊಂದನ್ನು ನಿರ್ಮಿಸಿದ್ದಾರೆ.
ಜಮೀನಿನಲ್ಲಿ ಒಂದಷ್ಟು ತೆಂಗಿನಮರಗಳಿದ್ದು, ಅದರ ಆದಾಯವನ್ನೂ ಅಶ್ರಮಕ್ಕೆ ಬಳಕೆ ಮಾಡುತ್ತೇವೆ. ಉಳಿದಂತೆ ಆಶ್ರಮವಾಸಿಗಳಿಗೆ ಪ್ರಾರಂಭದಲ್ಲಿ ಅಡುಗೆಗೆ ವ್ಯವಸ್ಥೆ ಮಾಡಿ ಮುಂದೆ ಅವರೇ ಅಡುಗೆ ತಯಾರಿ ಮಾಡುವ ಆಲೋಚನೆಯನ್ನೂ ಹೊಂದಿದ್ದಾರೆ.

ಹೆಣ್ಣು ಮಕ್ಕಳಿಂತ ಹಿರಿಯ ಮಹಿಳೆಯರಿಗೂ ಆಶ್ರಮದಲ್ಲಿ ಆಶ್ರಯ ನೀಡುವ ಆಲೋಚನೆ ಹೊಂದಿದ್ದು, ಆರೋಗ್ಯವಂತರಾಗಿರುವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎನ್ನುತ್ತಾರೆ.
ಪ್ರಾಣಿ ಪ್ರೇಮಿಯಾಗಿರುವ ಕುಮುದಾ ಅವರಿ ಹಿಂದೆ ಹತ್ತಾರು ನಾಯಿಗಳನ್ನು ಸಾಕುತ್ತಿದ್ದು, ಅದಕ್ಕೆ ಬೇಕಾದ ಆರೈಕೆಯನ್ನೂ ಸ್ವತಃ ಅವರೇ ಮಾಡುತ್ತಿದ್ದರು. ಆದರೆ ಪ್ರಸ್ತುತ ವಯಸ್ಸಾದ ಕಾರಣದಿಂದ ನಾಯಿಗಳನ್ನು ಸಾಕುವುದನ್ನು ಬಿಟ್ಟು ಬಿಟ್ಟಿದ್ದಾರೆ.

ಆದರೆ ಮುಂದೆ ಆಶ್ರಮವಾಸಿಗಳ ಜತೆ ನಾಯಿಗಳನ್ನೂ ಸಾಕುವ ಯೋಜನೆಯೊಂದಿಗೆ ಅದಕ್ಕಾಗಿ ಪ್ರತ್ಯೇಕ ಗೂಡಿನ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಈ ಸೇವಾ ಯೋಜನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಅವರು ‘ಆಶ್ರಮ ಸ್ಥಾಪನೆಯ ಉದ್ದೇಶದಿಂದ 10 ವರ್ಷಗಳ ಹಿಂದೆಯೇ ಜಗದೀಶ್ ಕುಡ್ವಾ, ಕುಮುದಾ ಹೆಸರಿನಲ್ಲಿ ಜೆ.ಕೆ.ಸೇವಾ ಟ್ರಸ್ಟ್ ಸ್ಥಾಪಿಸಿದ್ದು, ಮುಂದೆ ಜೆ.ಕೆ.ಮಹಿಳಾ ಸೇವಾಶ್ರಮವನ್ನು ಆರಂಭಿಸಲಿದ್ದೇವೆ.
ಆದರೆ ನಮ್ಮ ಆಶ್ರಮದಲ್ಲಿ ಒಬ್ಬರಿಂದ ಒಬ್ಬರಿಗೆ ತಗಲುವ ರೋಗದ ಲಕ್ಷಣವಿರುವವರನ್ನು, ಅತೀ ಹೆಚ್ಚು ಸಿಡುಕು ಸ್ವಭಾವ ಹೊಂದಿದವರನ್ನು ಸೇರಿಸಿಕೊಳ್ಳುವುದಿಲ್ಲ. ಅದರಿಂದ ಉಳಿದವರಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚು.

ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಆಶ್ರಮವಾಸಿಗಳ ಆರೋಗ್ಯದ ದೃಷ್ಟಿಯಿಂದ ವೈದ್ಯರ ಜತೆಯೂ ಮಾತುಕತೆ ನಡೆಸಿದ್ದು, ಅವರು ಆಶ್ರಮಕ್ಕೆ ಬಂದು ಸೇವೆ ನೀಡುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.