ಮಂಗಳೂರು/ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರ ರಾಜಧಾನಿಯ ಆಡಳಿತದಿಂದ ಹೊರಗೆಹಾಕುವ ಮೂಲಕ ಬಿಜೆಪಿ, ಎರಡೂವರೆ ದಶಕದ ಬಳಿಕ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ.

70 ಸಂಖ್ಯಾಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 2015ರಲ್ಲಿ ಮೂರು ಮತ್ತು 2020ರಲ್ಲಿ ಎಂಟು ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಆದರೆ ಈ ಭಾರಿ, 48 ಕ್ಷೇತ್ರಗಳನ್ನು ಜಯಿಸಿ ಭಾರಿ ಬಹುಮತ ಸಾಧಿಸಿದೆ. ಕಳೆದೆರಡು ಚುನಾವಣೆಗಳಲ್ಲಿ ಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ವಿಜಯದ ಹಾರ ಹಾಕಿಸಿಕೊಂಡಿದ್ದ ಎಎಪಿಗೆ, ಈ ಸಲ ಕೇವಲ 22 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ದಿಲ್ಲಿಯಲ್ಲಿ ಬಿಜೆಪಿ ಸರಕಾರ ರಚಿಸುವ ನಿಟ್ಟಿನಲ್ಲಿಪಕ್ಷದ ವರಿಷ್ಠರು ರವಿವಾರ ಸಮಾಲೋಚನೆ ಆರಂಭಿಸಿದ್ದಾರೆ. ಬಹು ನಿರೀಕ್ಷಿತ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದೇ ಈಗ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಅರಳಿದ ಕಮಲ; ದಿಲ್ಲಿಯ ದಿಲ್ ಗೆದ್ದ ಬಿಜೆಪಿ
ಸಿಎಂ ರೇಸ್ನಲ್ಲಿರುವ ಸಂಭಾವ್ಯ ನಾಯಕರು
ಪರ್ವೇಶ್ ವರ್ಮಾ : ಮಾಜಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ದ ನವದೆಹಲಿ ಕ್ಷೇತ್ರದಲ್ಲಿ 4,089 ಮತಗಳ ಅಂತರದಿಂದ ಮಣಿಸಿರುವ ಪರ್ವೇಶ್ ವರ್ಮಾ ಇದೀಗ ಕೇಂದ್ರಬಿಂದುವಾಗಿದ್ದಾರೆ. ಈ ವರ್ಷ ದೆಹಲಿ ಚುನಾವಣೆಯ ಮ್ಯಾನ್ ಆಫ್ ದಿ ಮ್ಯಾಚ್ ಎಂದೇ ಕರೆಸಿಕೊಳ್ಳುತ್ತಿರುವ ಪರ್ವೇಶ್ ವರ್ಮಾ ದೆಹಲಿ ಮುಖ್ಯಮಂತ್ರಿಗಳ ರೇಸ್ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 2014-2024ರವರೆಗೆ ಸಂಸದರಾಗಿದ್ದ ಪರ್ವೇಶ್, ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ.
ವಿಜೇಂದರ್ ಗುಪ್ತಾ : ದೆಹಲಿ ಬಿಜೆಪಿಯ ಮಾಜಿ ಮುಖ್ಯಸ್ಥರಾಗಿರುವ ಅವರು, ಎಎಪಿ ಪ್ರಾಬಲ್ಯದ ಹೊರತಾಗಿಯೂ 2015 ಮತ್ತು 2020 ಎರಡರಲ್ಲೂ ರೋಹಿಣಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಗುಪ್ತಾ ದೆಹಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವೀರೇಂದ್ರ ಗುಪ್ತಾ ರೋಹಿಣಿ ಕ್ಷೇತ್ರದ ‘ಹ್ಯಾಟ್ರಿಕ್’ ಶಾಸಕ. ಇಲ್ಲಿ 37,816 ಮತಗಳಿಂದ ಜಯ ಗಳಿಸಿದ್ದಾರೆ.
ಆಶಿಷ್ ಸೂದ್ : ಜನಕಪುರಿ ಕ್ಷೇತ್ರದಲ್ಲಿ 18,766 ಮತಗಳಿಂದ ಗೆಲುವು ಸಾಧಿಸಿರುವ ಆಶಿಷ್ ಸೂದ್, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಆಡಳಿತ ನಡೆಸಿದ ಅನುಭವ ಹೊಂದಿದ್ದಾರೆ. ಸದ್ಯ ಗೋವಾದಲ್ಲಿ ಬಿಜೆಪಿ ಉಸ್ತುವಾರಿ ಹಾಗೂ ಕಾಶ್ಮೀರದಲ್ಲಿ ಸಹ ಉಸ್ತುವಾರಿಯಾಗಿರುವುದು ಇವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ರೇಖಾ ಗುಪ್ತಾ : ಶಾಲಿಮಾರ್ ಬಾಗ್ ಕ್ಷೇತ್ರದಲ್ಲಿ 29,000ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ ರೇಖಾ ಗುಪ್ತಾ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ರೇಖಾ, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಸತೀಶ್ ಉಪಾದ್ಯಾಯ: ನವದೆಹಲಿ ನಗರ ಪಾಲಿಕೆಯ ಮಾಜಿ ಉಪಾಧ್ಯಕ್ಷ ಸತೀಶ್ ಉಪಾದ್ಯಾಯ, ಆರ್ಎಸ್ಎಸ್ ನಾಯಕತ್ವದೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿಯ ಸಹ ಉಸ್ತುವಾರಿ ಆಗಿರುವ ಸತೀಶ್, ಮಾಳವಯಾ ನಗರ ಕ್ಷೇತ್ರದಲ್ಲಿ ಎಎಪಿಯ ಪ್ರಮುಖ ನಾಯಕ ಸೋಮನಾಥ್ ಭಾರ್ತಿ ಎದುರು 2,131 ಮತಗಳ ಅಂತರದಿಂದ ಗೆದ್ದಿದ್ದಾರೆ.
ಶಿಖಾ ರಾಯ್: ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಎಎಪಿಯ ಪ್ರಮುಖ ನಾಯಕ ಸೌರಭ್ ಭಾರದ್ವಾಜ್ ಎದುರು 3,188 ಮತಗಳ ಅಂತರದಿಂದ ಬಿಜೆಪಿಯ ಶಿಖಾ ರಾಯ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಹೈಕಮಾಂಡ್ ಮಹಿಳಾ ಅಭ್ಯರ್ಥಿಗೆ ಅವಕಾಶ ನೀಡಲು ನಿರ್ಧರಿಸಿದರೆ, ಶಿಖಾಗೆ ಅದೃಷ್ಟ ಒಲಿಯಬಹುದು ಎಂದು ಹೇಳಲಾಗುತ್ತಿದೆ.
ಸೋಲಿನೊಂದಿಗೆ ಕನಸು ಭಗ್ನ
ರಮೇಶ್ ಬಿಧುರಿ : ಬಿಜೆಪಿಯ ಸಿಎಂ ಫೇಸ್ ಎಂದು ರಮೇಶ್ ಬಿಧುರಿಯನ್ನು ಎಎಪಿ ಹೇಳಿತ್ತು. ಹಾಗೆಂದು ಚುನಾವಣಾ ಪ್ರಚಾರದ ಸಮಯದಲ್ಲಿ ಅವರನ್ನು ಚರ್ಚೆಗೂ ಆಹ್ವಾನಿಸಿತ್ತು. ಆದರೆ ಮಾತೃ ಪಕ್ಷ ಸಿಎಂ ಫೇಸ್ ಅನ್ನು ನಿರ್ಧರಿಸಲಾಗಿಲ್ಲ ಎಂದಿತ್ತು. ದೆಹಲಿ ಸಿಎಂ ಅತಿಶಿ ವಿರುದ್ದ ಬಿಧುರಿ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.