ಮಂಗಳೂರು: ಸಹಕಾರಿ ರತ್ನ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಂಸ್ಥಾಪಕರಾಗಿರುವ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಪ್ರವರ್ತಿತ ನವೋದಯ ಸ್ವ- ಸಹಾಯ ಗುಂಪುಗಳ ರಜತ ಸಂಭ್ರಮ ಮಂಗಳೂರಿನ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.

8 ಜಿಲ್ಲೆಗಳ 1.5 ಲಕ್ಷಕ್ಕೂ ಮಿಕ್ಕಿ ಮಹಿಳೆಯರು ನೀಲಿಬಣ್ಣದ ಸಮವಸ್ತ್ರದಲ್ಲಿ ಶಿಸ್ತು ಬದ್ಧವಾಗಿ ಭಾಗವಹಿಸಿರುವುದು ಈ ಸಮಾವೇಶದ ವೈಶಿಷ್ಟ್ಯ. ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಒಂದೇ ವೇದಿಕೆಯಲ್ಲಿ ಸಮಾವೇಶಗೊಂಡಿರುವುದು ರಾಜ್ಯದಲ್ಲೇ ಇದೇ ಪ್ರಥಮ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮತ್ತು ಉಪ ಮುಖ್ಯ ಮಂತ್ರಿ ಡಿಕೆ. ಶಿವ ಕುಮಾರ್ ಹಾಗೂ ಸ್ಪೀಕರ್ ಯು.ಟಿ. ಖಾದರ್ ಅವರು ಸಹಕಾರಿ ಧ್ವಜವಂದನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ರಜತ ಸಂಭ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಇಫ್ಕೋ ಸಂಸ್ಥೆಯ ಉದಯ ಶಂಕರ್ ಅವಸ್ತಿ, ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ವಿ. ಸುನಿಲ್ ಕುಮಾರ್, ಕಿರಣ್ ಕೊ, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ರೈ, ಡಾ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಯಶ್ಪಾಲ್ ಸುವರ್ಣ, ಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಎಸ್.ಎಲ್ ಭೋಜೇ ಗೌಡ, ಬಂಟರ ಸಂಘದ ಐಕಳ ಹರೀಶ್ ಶೆಟ್ಟಿ, ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಮಿಥುನ್ ರೈ, ಇನಾಯತ್ ಆಲಿ, ಸಂಜೀವ ಮಠಂದೂರು, ಆರ್. ಪದ್ಮರಾಜ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಮೊಳಹಳ್ಳಿ, ರಕ್ಷಿತ್ ಶಿವರಾಂ, ಕಿಶೋರ್ ಆಳ್ವ, ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ದೇವರಾಜ್, ಡಾ. ಪಿ.ಎಲ್. ಧರ್ಮ, ಡಾ. ಮೋಹನ್ ಆಳ್ವ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಡಾ. ವಿದ್ಯಾ ಕುಮಾರಿ, ಸಹಕಾರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವಚನ ನೀಡಿದರು.
ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅವರು’ ಡಿ.ಕೆ. ಶಿವ ಕುಮಾರ್ ಅವರು ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತರಾಗಿದ್ದಾರೆ’ ಎಂದು ಹೇಳಿದರು.
ಸೈನಿಕರ ಕಲ್ಯಾಣ ನಿಧಿಗೆ 3 ಕೋಟಿ ರೂ ದೇಣಿಗೆ ನೀಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್
ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪ್ರಸ್ತಾವನೆಗೈದು ಭಯೋತ್ಪಾದನೆಯ ವಿರುದ್ಧದ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಿರುವ ಸೈನಿಕರಿಗೆ ಶಕ್ತಿ ತುಂಬುವುದಕ್ಕಾಗಿ ನವೋದಯ ಸಂಸ್ಥೆಯಿಂದ ಮತ್ತು ತನ್ನ ವೈಯಕ್ತಿಕ ನೆಲೆಯಲ್ಲಿ 3 ಕೋಟಿ ರೂ. ಸೈನಿಕರ ಕಲ್ಯಾಣಕ್ಕೆ ನೀಡಲಾಗುವುದು ಎಂದು ಘೋಷಿಸಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ್ ಪ್ರೇರಣೆಯಿಂದ ನಾನು ಮಹಿಳೆಯರಿಗೆ ಶಕ್ತಿ ನೀಡ ಬೇಕೆಂದು 25 ವರ್ಷಗಳ ಹಿಂದೆ ನವೋದಯ ಸ್ವ-ಸಹಾಯ ಸಂಘ ಆರಂಭಿಸಿದ್ದೆ. ಮಹಿಳೆಯರ ಶಕ್ತಿ ಎಷ್ಟಿದೆ, ಸ್ವಾವಲಂಬನೆ ಸಾಧಿಸಿದ್ದಾರೆ ಎನ್ನುವುದನ್ನು ತೋರಿಸಲು ಈ ಸಮಾವೇಶ. ಈಗಾಗಲೇ 8 ಜಿಲ್ಲೆಗಳಲ್ಲಿದ್ದು, ಸಾಧ್ಯವಾದರೆ ಇನ್ನೆರಡು ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದರು.

ಕರಾವಳಿಯ ಸಹಕಾರಿ ವ್ಯವಸ್ಥೆ ಬಲಿಷ್ಟವಾಗಿದೆ ಎಂದ ಡಿಕೆಶಿ
ಉದ್ಘಾಟನೆಗೈದ ಡಿಸಿಎಂ ಡಿ.ಕೆ. ಶಿವ ಕುಮಾರ್ ಮಾತನಾಡಿ, 25 ವರ್ಷಗಳ ಹಿಂದೆ ತಾನು ಸಹಕಾರಿ ಸಚಿವನಾಗಿದ್ದ ಸಂದರ್ಭದಲ್ಲಿ ನವೋದಯ ಸ್ವ ಸಹಾಯ ಸಂಘಗಳ ಉದ್ಘಾಟಿಸಿದ್ದೆ ಎಂದು ಸ್ಮರಿಸಿದರು. ಹೆಣ್ಣು ಕುಟುಂಬದ ಕಣ್ಣು ಎಂದು ಸ್ತ್ರೀ ಶಕ್ತಿ ಗುಂಪುಗಳನ್ನು ಸರಕಾರ ಆರಂಭಿಸಿತ್ತು. ಹೆಣ್ಮಕ್ಕಳು ಸ್ವಾವಲಂಬಿಗಳಾಗಿ ದೊಡ್ಡ ಶಕ್ತಿಯಾಗಿದ್ದಾರೆ. ಅವರು ದೇಶದ ಆಸ್ತಿ. ಹೆಣ್ಮಕ್ಕಳಿಗೆ ಸಮಾಜದಲ್ಲಿ ಮೊದಲ ಸ್ಥಾನವಿದೆ.

ಕರಾವಳಿಯ ಸಹಕಾರಿ ವ್ಯವಸ್ಥೆ ಬಲಿಷ್ಟವಾಗಿದೆ. ಸಾಲ ಮರು ಪಾವತಿಯಲ್ಲಿ ಮುಂಚೂಣಿಯಲ್ಲಿದ್ದು, ಸಹಕಾರಿ ತತ್ವದ ಈ ಪರಂಪರೆ ಮುಂದುವರಿಯಲಿ ಎಂದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆ, ಸಂಸ್ಕೃತಿ, ಶಾಂತಿಯ ವಾತಾವರಣ ಉಳಿಯಬೇಕೆಂದು ಆಶಿಸಿದರು.