Connect with us

DAKSHINA KANNADA

ಅಣ್ಣನಿಗೆ ತಮ್ಮ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ; ಆಸ್ಪತ್ರೆಯಲ್ಲಿ ಗಾಯಾಳು ಸಾವು

Published

on

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಬಳಿ ಅಣ್ಣನ ಮೇಲೆ ತಮ್ಮ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ತೀವ್ರ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅಣ್ಣ ಹನುಮಪ್ಪ (42) ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

ಮಂಗಳೂರು-ಬೆಂಗಳೂರು ರೈಲು ಮಾರ್ಗದ ಕೋಡಿಂಬಾಳ ಸಮೀಪ ಕೋರಿಯರ್ ರೈಲು ಟ್ರಾಕ್ ಬಳಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿತ್ತು. ಗಾಯಾಳು ಸಾವಿನ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮೃತ ಹನುಮಪ್ಪ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿಯಾಗಿರುತ್ತಾರೆ. ಸಹೋದರ ನಿಂಗಪ್ಪ (21) ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಮಂಗಳೂರು ವಿಭಾಗದ ರೈಲ್ವೇ ಪೊಲೀಸ್‌ ಇನ್ಸ್ಪೆಕ್ಟರ್ ಜಯಾನಂದ, ಎಎಸ್ಐ ಮಧುಚಂದ್ರ, ವಿಧಿವಿಜ್ಞಾನ ತಂಡ ಹಾಗೂ ರೈಲ್ವೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಕಡಬ ಠಾಣಾ ಎಸ್ ಐ ಅಭಿನಂದನ್ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಹನುಮಪ್ಪ ವಿಪರೀತ ಕುಡಿತದ ಚಟ ಹೊಂದಿದ್ದು, 14 ವರ್ಷಗಳ ಹಿಂದೆ ಆತನ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಇತ್ತೀಚೆಗೆ ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದ್ದನು. ಅಲ್ಲದೆ ಆರೋಪಿ ಸಹೋದರನ ಜತೆಗೂ ಗಲಾಟೆ ಮಾಡಿಕೊಂಡಿದ್ದನು. ಹನುಮಪ್ಪನ ಹಿಂಸೆಯಿಂದ ರೋಸಿ ಹೋಗಿ ತಮ್ಮ ನಿಂಗಪ್ಪ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ.

READ IN ENGLISH : https://www.nammakudlaenglish.com/brother-dies-after-sibling-sets-him-on-fire-by-pouring-diesel-in-kadaba/

ಇದನ್ನೂ ಓದಿ: ಬೇಪೂರ್ ಸಮುದ್ರದಲ್ಲಿ ಹಡಗಿಗೆ ಬೆಂಕಿಬಿದ್ದ ಪ್ರಕರಣ; ಗಾಯಗೊಂಡವರಿಗೆ ಮಂಗಳೂರಿನಲ್ಲಿ ಚಿಕಿತ್ಸೆ

ಈ ಕುರಿತಂತೆ ಆರೋಪಿ ನಿಂಗಪ್ಪ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಮಂಗಳೂರು ರೈಲ್ವೇ ಪೊಲೀಸರು ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದರು. ಕೌಟಂಬಿಕ ಕಲಹದಿಂದಾಗಿ ಈ ಘಟನೆ ನಡೆದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಘಟನೆಯ ವಿವರ:

ಸಹೋದರರಿಬ್ಬರೂ ಪುತ್ತೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನ ತಮ್ಮ ಊರಿಗೆ ರೈಲಿನಲ್ಲಿ ಹೊರಟಿದ್ದರು. ಆದರೆ ಅಣ್ಣನನ್ನು ಮುಗಿಸಲು ಮೊದಲೇ ಸಂಚು ರೂಪಿಸಿದ್ದ ನಿಂಗಪ್ಪಕೋಡಿಂಬಾಳ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಅಣ್ಣನನ್ನು ಕೆಳಗಿಳಿಸಿದ್ದಾನೆ. ರೈಲು ಹೊರಟುಹೋದ ಬಳಿಕ ನಿಲ್ದಾಣದಿಂದ ಒಂದು ಕಿ.ಮೀ ದೂರದ ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿಗೆ ಕರೆದೊಯ್ದು ಏಕಾಏಕಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಹನುಮಪ್ಪ ಪಕ್ಕದಲ್ಲೇ ಇದ್ದ ಚರಂಡಿಗೆ ಹಾರಿ ನೀರಿನಲ್ಲಿ ಹೊರಳಾಡಿದ್ದ. ಆತನ ಚೀರಾಟ ಕೇಳಿ ಸ್ಥಳೀಯರು ಧಾವಿಸಿ ಬಂದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮೊದಲು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದದರು. ನಿನ್ನೆ ರಾತ್ರಿ ಗಾಯಾಳು ಹನುಮಂತಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂಬ ಮಾಹಿತಿ ಬಂದಿದೆ.

DAKSHINA KANNADA

ಡಾ.ಹರಿಕೃಷ್ಣ ಪುನರೂರು , ಮಾಜಿ ಸಚಿವ ರಮಾನಾಥ ರೈಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

Published

on

ಬಂಟ್ವಾಳ :  ಸಾಮಾಜಿಕವಾಗಿ, ಧಾರ್ಮಿಕವಾಗಿ ತೊಡಗಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಿದ ಮಹನೀಯರನ್ನು ಗೌರವಿಸುವುದು ಇಂದು ಪ್ರಸ್ತುತ. ಸಮಾಜವನ್ನು ಒಂದುಗೂಡಿಸುವ ಕಾರ್ಯ ಇಬ್ಬರ ಅಭಿನಂದನೆಯಿಂದ ನಡೆದಿದೆ ಎಂದು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ನುಡಿದರು.

ಮಂಗಳವಾರ (ನ.18) ಬಿ.ಸಿ.ರೋಡ್‌ನ ಸ್ಪರ್ಶ ಕಲಾಮಂದಿರದಲ್ಲಿ ಧರ್ಮದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹಾಗೂ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರಿಗೆ ನಡೆದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಅವರು ಅರ್ಶೀವಚನಗೈದರು.

ದ.ಕ.ಜಿಲ್ಲಾ  ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಧರ್ಮದರ್ಶಿ , ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕುರಿತು ಅಭಿನಂದನಾ ಭಾಷಣ ಮಾಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕುರಿತು ಅಭಿನಂದನಾ ಭಾಷಣ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹರಿಕೃಷ್ಣ ಪುನರೂರು, ಬಡವರ ಸೇವೆಗಾಗಿ ಜೀವನವನ್ನು ಸಮರ್ಪಿಸಿದ್ದೇವೆ. ಭಾಷಣ ಮಾಡುವ ಬದಲು ಕೆಲಸ ಮಾಡುವುದು ಮುಖ್ಯ  ಎಂದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಾರ್ವಜನಿಕ ಬದುಕಿನಲ್ಲಿ ನನ್ನ ಕರ್ತವ್ಯದ ಭಾಗವನ್ನು ಮಾಡಿದ್ದೇನೆ. ಎಲ್ಲ ಜಾತಿ, ಮತ, ಭಾಷೆ ಮೀರಿ ಮನುಷ್ಯರಾಗಿ ಬಾಳಬೇಕು ಎಂದರು.

ಅಭಿನಂದನಾ ಸಮಿತಿ ಅಧ್ಯಕ್ಷ  ಕೈಯ್ಯೂರು ನಾರಾಯಣ ಭಟ್ ಸಭಾಧ್ಯಕ್ಷತೆ ವಹಿಸಿದ್ದರು. ಬಡಗಬೆಳ್ಳೂರು ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ  ರಘು ಎಲ್. ಶೆಟ್ಟಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ದ.ಕ. ನಿರ್ದೇಶಕ ದಿನೇಶ್ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.

ಉದ್ಯಮಿ ರಘುನಾಥ ಸೋಮಯಾಜಿ, ಸಮಿತಿಯ ಗೌರವಾಧ್ಯಕ್ಷ ಶಿವಪ್ರಸಾದ ಅಜಿಲ ಅಳದಂಗಡಿ, ಅಭಿನಂದನಾ ಗ್ರಂಥದ ಸಂಪಾದಕ ಪ್ರೊ.ರಾಜಮಣಿ ರಾಮಕುಂಜ, ಕೋಶಾಧಿಕಾರಿ ರಾಮಗಣೇಶ್ ಪ್ರಭು  ಉಪಸ್ಥಿತರಿದ್ದರು.

ಇದನ್ನೂ ಓದಿ : ಇನ್ಮುಂದೆ ಖುಷಿ ಶಿವು ಅಲ್ಲ….ಹೆಸರು ಬದಲಿಸಿಕೊಂಡ ‘ನೀನಾದೆ ನಾ’ ನಟಿ..!

ಅಭಿನಂದನಾ ಸಮಿತಿಯ ಮಹಾಲಿಂಗ ಭಟ್, ಹರಿಕೃಷ್ಣ ಪುನರೂರು ಅವರ ಅಭಿನಂದನಾ ಪತ್ರ ವಾಚಿಸಿದರು. ಬೆಳಗ್ಗೆ 8 ರಿಂದ ಮಹಾಗಣಪತಿ ಹೋಮ, ಮಧ್ಯಾಹ್ನ ಭೋಜನದ ಬಳಿಕ ಶಾಂಭವಿ ವಿಜಯ ಯಕ್ಷಗಾನ ಬಯಲಾಟ ನಡೆಯಿತು. ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ವಂದಿಸಿದರು. ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು

Continue Reading

DAKSHINA KANNADA

ರಜೆ ಮಾಡದ ರಾಜ ಹಾಸ್ಯಗಾರ ವಳಕುಂಜರಿಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ

Published

on

ಮಂಗಳೂರು : 27 ವರ್ಷಗಳ ಶ್ರೀಕಟೀಲು ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆ ಪಡೆಯದೆ  ದಾಖಲೆ ಮಾಡಿರುವ ಅಪೂರ್ವ ಕಲಾರಾಧಕ, ತೆಂಕು ತಿಟ್ಟಿನ ಪ್ರಾತಿನಿಧಿಕ ಯಕ್ಷಗಾನ ರಾಜ ಹಾಸ್ಯಗಾರ ರವಿಶಂಕರ್ ವಳಕುಂಜ ಅವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ-2025’ ನೀಡಿ ಗೌರವಿಸಲಾಯಿತು.

ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಅವರು ಕಳೆದ 9 ವರ್ಷ ಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ ಯಕ್ಷ ಬಳಗವು ಕೊಡಮಾಡುವ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನಿಸಿದರು.

ಅಭಿನಂದನಾ ಭಾಷಣ ಮಾಡಿದ ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ, ರವಿಶಂಕರ್ ಅವರು ಹಾಸ್ಯ ರತ್ನ ನಯನ ಕುಮಾರ್, ಉಂಡೆಮನೆ ಶ್ರೀ ಕೃಷ್ಣ ಭಟ್ ಅವರಿಂದ ಯಕ್ಷ ಶಿಕ್ಷಣ ಪಡೆದು ಕಟೀಲು ಮೇಳಕ್ಕೆ ಸೇರಿದ ಮೂರು ವರ್ಷದಲ್ಲೇ ಪ್ರಧಾನ ಹಾಸ್ಯಗಾರರಾಗಿ ಮುನ್ನಡೆದವರು. ಯಕ್ಷಗಾನ ಪ್ರಸಂಗ ದೃಶ್ಯಾವಳಿ, ವಾಚಿಕ ಸಮಾರಾಧನೆ, ಯಕ್ಷ ಪಾತ್ರ ದೀಪಿಕಾ, ಪ್ರಸಂಗ ವಾಚಿಕ, ಯಕ್ಷಗಾನ ಪ್ರಸಂಗಗಳಲ್ಲಿ ನಾರದ, ರಂಗ ನಡೆಗೊಂದು ಕೈಪಿಡಿ ಮೊದಲಾದ ಅನುಭವ ಜನ್ಯ ಅಪೂರ್ವ ಸಾಹಿತ್ಯ ಕೃತಿಗಳನ್ನು ಯಕ್ಷರಂಗಕ್ಕೆ ನೀಡಿದ ಯಕ್ಷ ಸಾಹಿತಿ, ಸಂಪಾದಕ, ತಾಳಮದ್ದಳೆ ಅರ್ಥಧಾರಿ, ಸಂಪನ್ಮೂಲ ವ್ಯಕ್ತಿಎಂದು ಶ್ಲಾಘಿಸಿದರು.

ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿ ದ್ದರು. ಖ್ಯಾತ ವೈದ್ಯ ಡಾ. ಜಯಶಂಕರ್ ಮಾರ್ಲ, ಲೀಲಾಕ್ಷ ಬಿ. ಕರ್ಕೇರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸಿ. ಎಸ್. ಭಂಡಾರಿ,ರವೀಂದ್ರನಾಥ್ ಶೆಟ್ಟಿ, ರವೀಂದ್ರ ಶೇಟ್, ಸುಣ್ಣoಬಳ ವಿಶ್ವೇಶ್ವರ ಭಟ್, ಜಯಶೀಲ ಅಡ್ಯoತಾಯ, ಮೂಲ್ಕಿ ಕರುಣಾಕರ ಶೆಟ್ಟಿ, ದಿವಾಕರ ಶೆಟ್ಟಿ ಪರಾರಿ ಗುತ್ತು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು.

ಕದ್ರಿ ವಿಷ್ಣು ಸಂಸ್ಮರಣೆ

ಇಚ್ಲಂಪಾಡಿ, ಕೂಡ್ಲು,ಕೊರಕೋಡು, ಅಡೂರು, ಕುಂಡಾವು, ಕದ್ರಿ,ಧರ್ಮಸ್ಥಳ,ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು, ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರೆದಿದ್ದ ಮೇರು ಕಲಾವಿದ ಕದ್ರಿ ವಿಷ್ಣು. ಕಟೀಲು ಮೇಳದ ತಿರುಗಾಟದಿಂದ ನಿವೃತ್ತಿ ಪಡೆಯುವ ಸಂದರ್ಭದಲ್ಲಿ ಕದ್ರಿ ದೇವಸ್ಥಾನದಲ್ಲಿ ಐದು ದಶಕಗಳ ಪೂರ್ವ ದಲ್ಲಿ ನಡೆದಿದ್ದ ಅದ್ದೂರಿಯ ‘ಕದ್ರಿ ವಿಷ್ಣು ಸನ್ಮಾನ’ ಕಾರ್ಯಕ್ರಮದ ಮೆಲುಕಿನೊಂದಿಗೆ ಸಂಸ್ಮರಣೆ ನಡೆಸಲಾಯಿತು.

ಇದನ್ನೂ ಓದಿ : ಸೌದಿ ಬಸ್ ದುರಂತ ಪ್ರಕರಣ; ಒಂದೇ ಕುಟುಂಬದ 18 ಮಂದಿಯ ದುರಂತ ಅಂತ್ಯ!

ಕದ್ರಿ ಯಕ್ಷ ಬಳಗದ ಗೌರವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ತಾರಾನಾಥ ಶೆಟ್ಟಿ ಬೋಳಾರ, ಶಿವ ಪ್ರಸಾದ್ ಪ್ರಭು, ಎಲ್ಲೂರು ರಾಮಚಂದ್ರ ಭಟ್, ಸುಧಾಕರ್ ಶೆಟ್ಟಿ ದೋಣಿoಜೆ ಗುತ್ತು, ಕೃಷ್ಣ ಶೆಟ್ಟಿ ತಾರೆಮಾರ್, ಹರೀಶ್ ಕುಮಾರ್, ನಿವೇದಿತಾ ಎನ್ ಶೆಟ್ಟಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಮಧುಸೂದನ ಅಲೆವೂರಾಯ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ  ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಾಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಕಟೀಲು ಮೇಳದವರಿಂದ ‘ದಶಾವತಾರ’ ಯಕ್ಷಗಾನ ಬಯಲಾಟ ಜರುಗಿತು.

Continue Reading

DAKSHINA KANNADA

ಕಡಬ–ಪಂಜ ರಸ್ತೆಯಲ್ಲಿ ಏಕಾಏಕಿ ಮುರಿದುಬಿದ್ದ ಮರ; ಪ್ರಾಣಾಪಾಯದಿಂದ ಪಾರದ ಬೈಕ್ ಸವಾರ

Published

on

ಕಡಬ: ತಾಲೂಕಿನ ಕಡಬ–ಪಂಜ ರಾಜ್ಯ ಹೆದ್ದಾರಿಯ ಕೋಡಿಂಬಾಳ ಪಂಜ ಮಾರ್ಗದಲ್ಲಿ ಹಳೇ ಮರವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದ್ದು, ಇದೇ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ.


ಈ ಹಿಂದೆ ಇದೇ ತಿರುವಿನಲ್ಲಿ ಯಶವಂತ್ (42) ಎಂಬ ಬೈಕ್ ಸವಾರ ಚಲಿಸುತ್ತಿದ್ದ ಸಮಯದಲ್ಲಿ, ರಸ್ತೆಯ ಬದಿಯಲ್ಲಿ ಹಳೆಯ ಹಾಲುಮಡ್ಡಿ ಮರ ಅಡ್ಡವಾಗಿ ಮೇಲೆ ಬಿದ್ದು ಅಪಘಾತವಾಗಿತ್ತು. ಯಶವಂತ್ ಅವರು ಹೆಲ್ಮೆಟ್ ಧರಿಸಿದ್ದರಿಂದ ತಲೆಯ ತೀವ್ರ ಗಾಯ ತಪ್ಪಿದರೂ, ಕೈ, ಕಾಲು ಮತ್ತು ದೇಹದ ಹಲವೆಡೆ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು.

2024ರಲ್ಲಿ ಕೂಡಾ ಪುಳಿಕುಕ್ಕು ತಿರುವಿನಲ್ಲಿ ಸ್ಕೂಟರ್ನಲ್ಲಿ ಚಲಿಸುತ್ತಿದ್ದ ಎಡಮಂಗಲ ನಿವಾಸಿ ಸೀತರಾಮಗೌಡ ಎಂಬವರ ಸ್ಕೂಟಿಯ ಮೇಲೆಯೇ ಮರ ಬಿದ್ದು ಅವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು. ಘಟನೆ ನಂತರ ಸ್ಥಳೀಯರು ರಸ್ತೆ ತಡೆ ನಡೆಸಿ ಅಪಾಯಕಾರಿಯಾದ ಮರಗಳನ್ನು ತಕ್ಷಣ ಕಡಿದು ತೆರವುಗೊಳಿಸಲು ಆಗ್ರಹಿಸಿದ್ದರು.

ಇದನ್ನೂ ಓದಿ: ಬೆಳ್ತಂಗಡಿ: 18 ಅಡಿ ಎತ್ತರದಿಂದ ಬಿದ್ದಿದ್ದ ಪೈಂಟರ್ ಸಾ*ವು

ಸಾರ್ವಜನಿಕರು ಇಲ್ಲಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿಕೊಂಡು ಬಂದಿದ್ದರೂ ಮರಗಳನ್ನು ಕಡಿಯಲು ಇಲಾಖೆ ಮುಂದಾಗಿಲ್ಲ.

Continue Reading
Advertisement

Trending

Copyright © 2025 Namma Kudla News

You cannot copy content of this page