ಕೊಡಗು: ಮೊಬೈಲ್ನಲ್ಲೇ ಪತ್ನಿಗೆ ಪತಿ ತಲಾಖ್ ನೀಡಿದ್ದರ ಪರಿಣಾಮ ನವವಿವಾಹಿತೆಯೊಬ್ಬಳು ಆತ್ಮಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲಾಖ್ ನೀಡಿದ್ದ ಪತಿ ಹಾಗೂ ಆತನ ತಂದೆ, ತಾಯಿಗೆ ಸ್ಥಳೀಯ ಜಮಾತ್ ಆಡಳಿತ ಮಂಡಳಿ ಶಿಕ್ಷೆ ವಿಧಿಸಿದೆ.

ಕುಂಜಿಲ ಪಯೆನ್ರಿ ಮುಸ್ಲಿಂ ಜಮಾತ್ ಸದಸ್ಯತ್ವದಿಂದ ಮೂವರನ್ನು ಅಮಾನತು ಮಾಡಲಾಗಿದೆ. ಈಗಾಗಲೇ ಪತಿ ರುವೈಸ್, ತಂದೆ ಅಬ್ದುಲ್ಲಾ, ತಾಯಿ ಜಮೀಲರನ್ನು ಅಮಾನತು ಮಾಡಲಾಗಿದೆ. ಜಮಾತ್ ಆಡಳಿತ ಮಂಡಳಿ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದಲ್ಲಿ ವಾಟ್ಸಾಪ್ ವಾಯ್ಸ್ನಲ್ಲೇ ಪತಿ ತಲಾಖ್ ನೀಡಿದ್ದ ಅಘಾತದಿಂದ ನೊಂದ ಅಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದರು.ಈ ಮಧ್ಯೆ ಪತಿಯ ತಂದೆ- ತಾಯಿ ವಿರುದ್ಧವೂ ವರದಕ್ಷಿಣೆ ಆರೋಪ ಕೇಳಿ ಬಂದಿತ್ತು.

ಅಕ್ಟೋಬರ್ 4ಕ್ಕೆ ಮಧ್ಯಾಹ್ನ 2.30ರ ಸುಮಾರಿಗೆ ಪತಿ ರುಬೈಸ್ ವಾಟ್ಯಾಪ್ ವಾಯ್ಸ್ ಮೆಸೇಜ್ ಮೂಲಕ ಅಮೀರಾಳಿಗೆ ಎರಡು ಬಾರಿ ತಲಾಖ್ ಹೇಳಿದ್ದಾನೆ. ವಾಟ್ಯಾಪ್ ವಾಯ್ಸ್ನಲ್ಲಿ ತಲಾಖ್ ಬಂದ ಬೆನ್ನಿಗೇ ಅಮೀರ ನೇಣು ಹಾಕಿಕೊಂಡಿದ್ದಾರೆ.
ಕಾಲೇಜು ದಿನಗಳಲ್ಲೇ ಪ್ರೇಮಾಂಕುರ
ಅಮೀರಾ ಮತ್ತು ಕುಂಜಿಲ ಗ್ರಾಮದ ರುಬೈಸ್ ಕಾಲೇಜು ದಿನಗಳಲ್ಲೇ ಪ್ರೀತಿಸಿದ್ದರು. ಪಿಯುಸಿ ಮುಗಿಯುತ್ತಿದ್ದಂತೆ ಇಬ್ಬರೂ ಹಠಕ್ಕೆ ಬಿದ್ದು ಪೋಷಕರನ್ನು ಒಪ್ಪಿಸಿ ವಿವಾಹವಾಗಿದ್ದರು.
ಕಳೆದ ನವೆಂಬರ್ ತಿಂಗಳಲ್ಲಿ ಇಬ್ಬರ ವಿವಾಹ ನೆರವೇರಿತ್ತು. ವಿವಾಹದ ಸಂದರ್ಭ 25 ತೊಲ ಚಿನ್ನ ಕೊಡುವಂತೆ ಪತಿ ರುಬೈಸ್ ಕುಟುಂಬ ಬೇಡಿಕೆ ಇಟ್ಟಿತ್ತು.
ಆದರೆ ಬಡತನದಲ್ಲಿದ್ದ ಅಮೀರಾಳ ತಂದೆ ಮೊಹಮ್ಮದ್ 12 ತೊಲ ಬಂಗಾರ ಹಾಕಿ ಚೆನ್ನಾಗಿಯೇ ವಿವಾಹ ಮಾಡಿಕೊಟ್ಟಿದ್ದರು. ಆದರೆ ವಿವಾಹದ ಬಳಿಕ ಕುಂಜಿಲ ಗ್ರಾಮದ ಪತಿ ಮನೆಯಲ್ಲಿ ಅಮೀರಾಳಿಗೆ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು.
ಪ್ರತಿದಿನ ಬಂಗಾರ ಮತ್ತು ಒಡವೆ ತರುವಂತೆ ಪತಿಮನೆಯವರು ಪೀಡಿಸುತ್ತಿದ್ದರು. ಹಾಗಾಗಿ ಹಿಂಸೆ ತಾಳಲಾರದೆ, ಹಲವು ಬಾರಿ ತಂದೆ-ತಾಯಿಗೆ ದೂರವಾಣಿ ಕರೆ ಮಾಡಿ ಅಮೀರಾ ಅತ್ತಿದ್ದಳು.
ಕೊನೆಗೆ ಯಾವಾಗ ಹಿಂಸೆ ಜಾಸ್ತಿಯಾಯಿತೋ ತಂದೆ ಮೊಹಮ್ಮದ್ ಸ್ವತಃ ಹೋಗಿ ಮಗಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದರು. ಕಳೆದೊಂದು ತಿಂಗಳಿನಿಂದ ಅಮೀರಾ ತನ್ನ ತವರು ಮನೆಯಲ್ಲೇ ಉಳಿದಿದ್ದಳು.
ಪತಿ ರುಬೈಸ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ವರದಕ್ಷಿಣೆ ತಾರದೆ ತನ್ನ ಮನೆಗೆ ಹೋಗದಂತೆ ಮೊಬೈಲ್ ತಾಕೀತು ಮಾಡುತ್ತಿದ್ದ. ಜೊತೆಗೆ ನೀನು ಸಾಯಿ, ನಾನು ಬೇರೆ ಹುಡುಗಿಯನ್ನು ನೋಡಿದ್ದೇನೆ.
ಅವಳನ್ನೇ ಮದುವೆಯಾಗುತ್ತೇನೆ ಎಂದು ಮಾನಸಿಕ ಹಿಂಸೆ ನೀಡುತ್ತಿದ್ದ. ಇವೆಲ್ಲವನ್ನೂ ತಂದೆ -ತಾಯಿ ಜೊತೆ ಮುಕ್ತವಾಗಿ ಅಮೀರಾ ಹೇಳಿಕೊಂಡಿರಲಿಲ್ಲ.
ತಾನಾಗಿ ಇಷ್ಟಪಟ್ಟು ಆತನ್ನನ್ನು ವಿವಾಹವಾಗಿದ್ದಳು. ಇದೀಗ ತನ್ನಿಂದಾಗಿ ಬಡತನದಲ್ಲಿರುವ ತನ್ನ ತಂದೆಗೆ ಹಿಂಸೆಯಾಗುತ್ತಿದೆ ಎಂದು ನೊಂದುಕೊಳ್ಳುತ್ತಿದ್ದಳು.
ಹಾಗಾಗಿ ತಾನೇ ನೋವನ್ನು ನುಂಗಿಕೊಳ್ಳುತ್ತಿದ್ದಳು ಎಂದು ತಂದೆ ಮುಹಮ್ಮದ್ ಬೇಸರ ವ್ಯಕ್ತಪಡಿಸುತ್ತಾರೆ.
ಪೋಷಕರ ಮನೆಯಲ್ಲೇ ಇದ್ದ ಅಮೀರಾ ಅಯ್ಯಂಗೇರಿ ಸ್ವಗೃಹದ ಕೋಣೆಯೊಂದರಲ್ಲಿ ಹಗ್ಗದಿಂದ ಮನೆಯ ಮೇಲ್ಮಾವಣಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳು.
ಪ್ರಕರಣಕ್ಕೆ ಸಂಭಂದಿಸಿದಂತೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಮೃತಳ ತಂದೆ ಮೊಹಮ್ಮದ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.