ಬಂಟ್ವಾಳ: ಶನಿವಾರ ಮತ್ತು ರವಿವಾರ ನಡೆದ ಬಂಟ್ವಾಳದ ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ದಶಮಾನೋತ್ಸವದ ಹೊನಲು ಬೆಳಕಿನ ಸತ್ಯ- ಧರ್ಮ ಜೋಡುಕರೆ ಬಯಲು ಕಂಬಳ ಕೂಟದಲ್ಲಿ ದಾಖಲೆಯ 214 ಜತೆ ಕೋಣಗಳು ಭಾಗವಹಿಸಿದ್ದವು.

ಕನೆಹಲಗೆ ವಿಭಾಗದಲ್ಲಿ 2 ಜತೆ, ಅಡ್ಡಹಲಗೆ ವಿಭಾಗದಲ್ಲಿ 9 ಜತೆ, ಹಗ್ಗ ಹಿರಿಯ ವಿಭಾಗದಲ್ಲಿ 19 ಜತೆ, ನೇಗಿಲು ಹಿರಿಯ ವಿಭಾಗದಲ್ಲಿ 31 ಜತೆ, ಹಗ್ಗ ಕಿರಿಯ ವಿಭಾಗದಲ್ಲಿ 26 ಜತೆ, ನೇಗಿಲು ಕಿರಿಯ ವಿಭಾಗದಲ್ಲಿ 75 ಜತೆ ಮತ್ತು ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ 52 ಜತೆ ಕೋಣಗಳು ಭಾಗವಹಿಸಿದ್ದವು.
ಕಂಬಳದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರು ಮಾತನಾಡಿ ನಮ್ಮ ಮೂಲ ಸಂಸ್ಕೃತಿಯ ಜತೆ ರೈತರ ಜಾನಪದ ಕ್ರೀಡೆ ಕಂಬಳವನ್ನು ಉಳಿಸಿ ಬೆಳಸಬೇಕು ಎಂದರು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ। ಪಿ.ಎಸ್. ಹರ್ಷ, ಪ್ರಮುಖರಾದ ಜಗನ್ನಾಥ ನಿರ್ಮಲ್ ನರಿಕೊಂಬು, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಪ್ರಧಾನ ತೀರ್ಪುಗಾರ ಗುಣಪಾಲ ಕಡಂಬ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ನೇರಳ ಪಲ್ಕೆ, ಶಿವಾನಂದ ಮೈರಾ, ಪುರಂದರ ಕುಕ್ಕಾಜೆ ಮುಂತಾದವರು ಉಪಸ್ಥಿತರಿದ್ದರು.
ಸಾಧಕರಾದ ಸಂಜೀವ ಶೆಟ್ಟಿ ಕಿಂಜಾಲು, ಶಿವಪ್ಪ ಪೂಜಾರಿ ಜೇಡರ ಬೆಟ್ಟು, ಬಾಲಕೃಷ್ಣ ಬಂಗಾಡಿ, ವಜ್ರ ಪೂಜಾರಿ, ಮೋನಪ್ಪ ಸಾಲಿಯಾನ್, ವೈಭವ್ ಕೆ. ಅರ್ಮುಡ್ತಾಯ ಅವರನ್ನು ಸನ್ಮಾನಿಸಲಾಯಿತು.

ಕಂಬಳದ ಫಲಿತಾಂಶ:
ಕನೆಹಲಗೆ ವಿಭಾಗದಲ್ಲಿ ಬೇಲಾಡಿ ಬಾವ ಅಶೋಕ್ ಶೆಟ್ಟಿ ಮತ್ತು ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರು ಸಮಾನ ಬಹುಮಾನ ಪಡೆದರು. ಇಲ್ಲಿ ಹಲಗೆ ಮುಟ್ಟಿದವರು ತೆಕ್ಕಟ್ಟೆ ಸುಧೀರ್ ದೇವಾಡಿಗ ಮತ್ತು ಬೈಂದೂರು ಭಾಸ್ಕರ ದೇವಾಡಿಗ ಅವರು.
ಅಡ್ಡ ಹಲಗೆ ವಿಭಾಗದಲ್ಲಿ ನಾರಾವಿ ಯುವರಾಜ್ ಜೈನ್ ಪ್ರಥಮ ಹಾಗೂ ಪೆರಿಯಾವು ಗುತ್ತು ಸತೀಶ್ ಗಟ್ಟಿಯಾಳ್ ದ್ವಿತೀಯ ಸ್ಥಾನ ಗಳಿಸಿದರು. ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ ಮತ್ತು ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ. ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ “ಎ” ಮತ್ತು ದ್ವಿತೀಯ ಸ್ಥಾನ ರಾಯಿ ಶೀತಲ ಅಗರಿ ರೂಪ ರಾಜೇಶ್ ಶೆಟ್ಟಿ “ಎ” ಅವರು ಪಡೆದರು.
ಓಡಿಸಿದವರು ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ ಮತ್ತು ಬೈಂದೂರ್ ಹರೀಶ್. ಹಗ್ಗ ಕಿರಿಯ ವಿಭಾಗದಲ್ಲಿ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಪ್ರಥಮ ಹಾಗೂ ಬೆಳುವಾಯಿ ಪುತ್ತಿಗೆ ಪೆರೋಡಿ ಗುತ್ತು ತಾನಾಜಿ ಬಿ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿದರು. ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್ ಮತ್ತು ಮರೋಡಿ ಶ್ರೀಧರ್ ಕೋಣ ಓಡಿಸಿದ್ದರು.
ನೇಗಿಲು ಹಿರಿಯ ವಿಭಾಗದಲ್ಲಿ ಬೆಳ್ಳಿಪ್ಪಾಡಿ ಕೈಪ ಕೇಶವ ಮಂಕು ಭಂಡಾರಿ “ಬಿ” ಪ್ರಥಮ ಹಾಗೂ ಕನಡ್ತ್ಯಾರ್ ಕೃಷ್ಣ ಶೆಟ್ಟಿ ದ್ವಿತೀಯ ಸ್ಥಾನ ಪಡೆದರು. ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಮತ್ತು ಕಾವೂರ್ ತೋಟ ಸುದರ್ಶನ್ ಕೋಣ ಓಡಿಸಿದರು.
ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಜೈ ತುಳುನಾಡ್ ಕಕ್ಯಪದವು ಪುನ್ಕೆದಡಿ ರಾಮಯ್ಯ ಭಂಡಾರಿ ಮತ್ತು ದ್ವಿತೀಯ ಸ್ಥಾನ ಪಣೋಲಿಬೈಲು ಭಂಡಾರಮನೆ ಶಿವಾನಂದ ಕುಲಾಲ್ ಪಡೆದರು. ಕೋಣ ಓಡಿಸಿದವರು ಕಕ್ಯಪದವು ಪೆಂರ್ಗಾಲು ಕೃತಿಕ್ ಮತ್ತು ಪೆರಿಂಜೆ ಪ್ರಮೋದ್.
ನೇಗಿಲು ಸಬ್ ಜೂನಿಯರ್ ವಿಭಾಗದಲ್ಲಿ ಮರೋಡಿ ಕೆಳಗಿನಮನೆ ಕೃತೇಶ್ ಅಣ್ಣಿ ಪೂಜಾರಿ ಪ್ರಥಮ ಹಾಗೂ ದ್ವಿತೀಯ: ಭಟ್ಕಳ ಎಚ್.ಎನ್. ನಿವಾಸ ಪಿನ್ನುಪಾಲ್ ದ್ವಿತೀಯ ಸ್ಥಾನ ಗಳಿಸಿದರು. ಬೈಂದೂರು ವಿಶ್ವನಾಥ ದೇವಾಡಿಗ ಮತ್ತು ಭಟ್ಕಳ ವಿನೋದ್ ಕೋಣ ಓಡಿಸಿದ್ದರು.