ಮಂಗಳೂರು: ಕಟೀಲು ಪೇಟೆಯಲ್ಲಿ ಮುಸ್ಲಿಮ್ ಎಳನೀರು ವ್ಯಾಪಾರಿಗೆ ವ್ಯಾಪಾರ ನಡೆಸಲು ನಿಷೇಧ ಹೇರಿ, ಬೆದರಿಕೆ ಹಾಕಿದ ಬಿಜೆಪಿಯ ಕ್ರಿಮಿನಲ್ ಕಾರ್ಯಕರ್ತರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಂಡ ಬಜ್ಪೆ ಠಾಣಾಧಿಕಾರಿ ಸಂದೇಶ್ ಹಾಗೂ ಮೂರು ಸಿಬ್ಬಂದಿಗಳನ್ನು ರಾಜ್ಯ ಬಿಜೆಪಿ ಸರಕಾರ ಅಮಾನತುಗೊಳಿಸಿರುವುದು ಖಂಡನೀಯ.
ಇದು ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕುತ್ತಿರುವ ಆಳುವ ಬಿಜೆಪಿ ಬೆಂಬಲಿತ ಕೋಮುವಾದಿ ಗೂಂಡಾಗಿರಿಗೆ ಕಾನೂನು ಪ್ರಕಾರ ತಡೆ ಒಡ್ಡಿದ್ದಕ್ಕಾಗಿ ಪೊಲೀಸ್ ಇಲಾಖೆಯಿಂದ ಪಡೆದ ತಲೆದಂಡ, ನಾಚಿಕೆಗೇಡಿನ ಕ್ರಮ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಜಂಟಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ ಹಾಗೂ ಅಮಾನತನ್ನು ತಕ್ಷಣ ವಾಪಾಸು ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ, ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವ, ಬಹಿಷ್ಕಾರಗಳನ್ನು ಹಾಕುವ ಮೂಲಕ ಆರ್ಥಿಕವಾಗಿ ದುರ್ಬಲಗೊಳಿಸುವ, ಅಭದ್ರತೆಗೆ ದೂಡುವ ಕೋಮುವಾದಿ ಅಜೆಂಡಾವನ್ನು ಸರಕಾರದ ಬೆಂಬಲದೊಂದಿಗೆ ಬಿಜೆಪಿ ಕಾರ್ಯಕರ್ತರು ಜಾರಿಗೊಳಿಸುತ್ತಿದ್ದಾರೆ.
ಕಾನೂನು ಪ್ರಕಾರ ಗಂಭೀರ ಅಪರಾಧ ಪ್ರಕರಣವಾಗಿರುವ ಇಂತಹ ಕೃತ್ಯಗಳನ್ನು ಸಂಸದ, ಶಾಸಕರುಗಳ ಒತ್ತಡದಿಂದಾಗಿ ಪೊಲೀಸ್ ಇಲಾಖೆ ತಡೆಯಲು ಹಿಂಜರಿಯುತ್ತಿದೆ. ಕಟೀಲು ಪೇಟೆಯಲ್ಲಿಯೂ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹಾಕಲು ಪ್ರಯತ್ಮಗಳು ನಡೆದಿವೆ. ಅದರ ಭಾಗವಾಗಿಯೇ ಅಂಗಡಿಗಳಿಗೆ ಎಳೆನೀರು ಸರಬರಾಜು ಮಾಡುವ ಮುಸ್ಲಿಂ ವ್ಯಾಪಾರಿಗೆ ಎಳೆನೀರು ಇಳಿಸಲು ತಡೆಹಾಕಲಾಗಿದೆ.
ಊರಿಗೆ ಕಾಲಿಡದಂತೆ ಬೆದರಿಸಲಾಗಿದೆ. ಕ್ರಿಮಿನಲ್ ಹಿನ್ನಲೆಯ ಬಿಜೆಪಿ ಕಾರ್ಯಕರ್ತರ ಕೋಮುವಾದಿ ಗೂಂಡಾಗಿರಿಯ ವಿರುದ್ದ ದಕ್ಷ ಅಧಿಕಾರಿ ಎಂದು ಹೆಸರಾಗಿರುವ ಸಂದೇಶ್ ಆರೋಪಿಗಳನ್ನು ವಶಕ್ಕೆ ಪಡೆದು ಕ್ಷಿಪ್ರ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿ ಜನಪ್ರತಿನಿಧಿಗಳು, ಸರಕಾರದ ಮುಖ್ಯಸ್ಥರು ಬಜ್ಪೆ ಠಾಣಾಧಿಕಾರಿಯನ್ನು ಅಭಿನಂದಿಸಬೇಕಿತ್ತು.
ಬದಲಿಗೆ ತಮ್ಮ ಬೆಂಬಲದೊಂದಿಗೆ ಕೋಮುವಾದಿ ಅಜೆಂಡಾ ಜಾರಿಗೊಳಿಸುತ್ತಿರುವ ಕ್ರಿಮಿನಲ್ ಕಾರ್ಯಕರ್ತರನ್ನು ತೃಪ್ತಿಪಡಿಸಲು ಠಾಣಾಧಿಕಾರಿ ಸಹಿತ ಬಜ್ಪೆ ಠಾಣೆಯ ಪೊಲೀಸರ ತಲೆದಂಡ ಪಡೆಯಲಾಗಿದೆ. ಇಂತಹ ನಾಚಿಕೆಗೇಡಿನ ಕ್ರಮದಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯಕ್ಕೆ ಪೆಟ್ಟು ಬಿದ್ದಿದೆ. ಕೋಮುವಾದಿ ಪುಂಡಾಟಿಕೆಗೆ, ಗೂಂಡಾ ಗುಂಪುಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಇದನ್ನು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.
ಹಾಗೆಯೆ ಗೂಂಡಾಗಿರಿಗೆ ಕಡಿವಾಣ ಹಾಕಲು ಯತ್ನಿಸಿದ ಪೊಲೀಸರ ಮೇಲಿನ ಅಮಾನತು ಕ್ರಮ ಬಿಜೆಪಿ ಆಡಳಿತದಲ್ಲಿ ಜಿಲ್ಲೆಯಲ್ಲಿ ಚಿಗಿತು ಕೊಂಡಿರುವ ಮರಳು, ಟಿಂಬರ್, ಜುಗಾರಿ, ಗ್ಯಾಂಬ್ಲಿಂಗ್ ಮುಂತಾದ ದಂಧೆಯ ಮಾಫಿಯಾಗಳಿಗೆ ಮತ್ತಷ್ಟು ಬಲ ತುಂಬಲಿದೆ.
ಕೋಮುವಾದಿ ಪುಂಡರು ಹಾಗೂ ವಿವಿಧ ದಂಧೆಯ ಕ್ರಿಮಿನಲ್ ಗಳ ನಡುವೆ ಈಗಾಗಲೆ ಇರುವ ಹೊಂದಾಣಿಕೆಗಳು ಜಿಲ್ಲೆಯಲ್ಲಿ ಕಾನೂನಿನ ಆಡಳಿತವನ್ನು ಮುರಿದು ಹಾಕಲಿದೆ.
ಇದು ಜನಸಾಮಾನ್ಯರ ನೆಮ್ಮದಿಯ ಜೀವನಕ್ಕೆ ಕಂಟಕವಾಗಲಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಬಜ್ಪೆ ಠಾಣೆಯ ಪೊಲೀಸರ ಮೇಲಿನ ಅಮಾನತು ಕ್ರಮವನ್ನು ವಾಪಾಸು ಪಡೆದು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು, ಇಲ್ಲದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.