ಮಂಗಳೂರು: ಬ್ಯಾರಿ ಭಾಷಿಕರ ಕುರಿತು “ಮೈಕಾಲ” ಎಂಬ ಕೃತಿಯನ್ನು ರಚನೆ ಮಾಡುವ ಮೂಲಕ ಪ್ರಸಿದ್ಧಿ ಪಡೆದ ದಿವಂಗತ ಅಹ್ಮದ್ ನೂರಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಮಂಗಳೂರು ನಗರದ ಪುರಭವನದ ಅಹ್ಮದ್ ನೂರಿ ವೇದಿಕೆಯಲ್ಲಿ ಶುಕ್ರವಾರ ಸಂಜೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ಬಗ್ಗೆ ಬ್ಯಾರಿ ಲೇಖಕ, ಲೇಖಕಿಯರು ಬ್ಯಾರಿ ಭಾಷೆಯಲ್ಲಿ ಬರೆದ 10 ಕೃತಿಗಳನ್ನು ಅಕಾಡಮಿಯು ಪ್ರಕಟಿಸಿ ಇಂದು ಬಿಡುಗಡೆಗೊಳಿಸಲಾಗಿದೆ.
ಮುಂದೆಯೂ ಇನ್ನಷ್ಟು ಒಳ್ಳೆಯ ಕೃತಿಗಳನ್ನು ಪ್ರಕಟಿಸಲಾಗುವುದು. ಆ ಮೂಲಕ ಬ್ಯಾರಿ ಭಾಷೆಯ ಸಾಹಿತ್ಯ ವೃದ್ಧಿಗೆ ಪ್ರಯತ್ನಿಸಲಾಗುವುದು ಎಂದರು. ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಖತಿ, ಆಂದೋಲನದಲ್ಲಿ ತೊಡಗಿಸಿಕೊಂಡು ಗತಿಸಿದ ಮಹನೀಯರನ್ನು ನೆನಪಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮುಂದುವರಿಸಲಾಗುವುದು ಎಂದು ರಹೀಂ ಉಚ್ಚಿಲ್ ನುಡಿದರು.
ಈ ಕಾರ್ಯಕ್ರಮದಲ್ಲಿ ಅಕಾಡಮಿಯ ಮಾಜಿ ಸದಸ್ಯ, ಹಿರಿಯ ಸಾಹಿತಿ ಟಿ.ಎ.ಆಲಿಯಬ್ಬ ಜೋಕಟ್ಟೆಗೆ ದಿ. ಅಹ್ಮದ್ ನೂರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇನ್ನು ಅಹ್ಮದ್ ನೂರಿ ಅವರ ಬದುಕು ಮತ್ತು ಬರಹದ ಕುರಿತು ಪತ್ರಕರ್ತ ಹಂಝ ಮಲಾರ್ರ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಸಾಹಿತಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಪಡೀಲ್, ಮುಸ್ಲಿಂ ಲೇಖಕರ ಸಂಘದ ಮಾಜಿ ಅಧ್ಯಕ್ಷ ಸಈದ್ ಇಸ್ಮಾಯಿಲ್ ವಿಷಯ ಮಂಡಿಸಿದರು.
ಪತ್ರಕರ್ತ ಎ.ಕೆ. ಕುಕ್ಕಿಲ ಮಹಾತ್ಮಾ ಗಾಂಧೀಜಿ ಕುರಿತು ಬರೆದ “ಜಂಡ್ ಕಂಡ ತುನಿರೊ ಪಕೀರ” ಎಂಬ ಕೃತಿಯನ್ನು ಅಕ್ಷರಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಹಫ್ಸಾ ಬಾನು ಬೆಂಗಳೂರು ಬರೆದ ಡಾ. ಬಿ.ಆರ್. ಅಂಬೇಡ್ಕರ್ ಕೃತಿಯನ್ನು ಪತ್ರಕರ್ತ ಪೆರೂರ್ ಜಾರು, ಎಂ. ಅಶೀರುದ್ದೀನ್ ಆಲಿಯಾ ಬರೆದ ಸ್ವಾಮಿ ವಿವೇಕಾನಂದ ಕೃತಿಯನ್ನು ಕೊಂಕಣಿ ಸಾಹಿತ್ಯ ಅಕಾಡಮಿಯ ಸದಸ್ಯ ಗೋಪಾಲಕೃಷ್ಣ ಭಟ್, ಅಬ್ದುಲ್ ರಝಾಕ್ ಅನಂತಾಡಿ ಬರೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಕೃತಿಯನ್ನು ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ರಹೀನಾ ತೊಕ್ಕೊಟ್ಟು ಬರೆದ ಹವಾಲ್ದಾರ್ ಅಬ್ದುಲ್ ಹಮೀದ್ ಕೃತಿಯನ್ನು ಸಿಆರ್ಪಿಎಫ್ ಯೋಧ ಝುಬೈರ್ ಹಳೆನೇರೆಂಕಿಯ ಪತ್ನಿ ಮೆಹರಾಝ್, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಬರೆದ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಝುಲೇಖಾ ಮುಮ್ತಾಝ್ ಬರೆದ ಡಾ.ಎಪಿಜೆ ಅಬ್ದುಲ್ ಕಲಾಂ ಕೃತಿಯನ್ನು ಶಾರದಾ ವಿದ್ಯಾಲಯದ ಪ್ರೊ.ಎಂ.ಬಿ. ಪುರಾಣಿಕ್, ಮರಿಯಮ್ ಇಸ್ಮಾಯಿಲ್ ಬರೆದ ವೀರ ರಾಣಿ ಅಬ್ಬಕ್ಕ ಕೃತಿಯನ್ನು ರಂಗಭೂಮಿ ಕಲಾವಿದೆ ಸರೋಜಿನಿ ಶೆಟ್ಟಿ, ಮುಹಮ್ಮದ್ ಅಶ್ರಫ್ ಬಾವಾ ಬರೆದ ಮೌಲಾನಾ ಅಝಾದ್ ಕೃತಿಯನ್ನು ಡಾ. ಎಂಎಸ್ಎಂ ಅಬ್ದುಲ್ ರಶೀದ್ ಝೈನಿ ಸಖಾಫಿ ಕಾಮಿಲ್, ಬಶೀರ್ ಅಹ್ಮದ್ ಕಿನ್ಯಾ ಬರೆದ ಅಟಲ್ ನಬಿಹಾರಿ ವಾಜಪೇಯಿ ಕೃತಿಯನ್ನು ಮುಸ್ತಫಾ ತಂಙಳ್ ಕೋಲ್ಪೆ ಬಿಡುಗಡೆಗೊಳಿಸಿದರು.
ಬ್ಯಾರಿ ಅಕಾಡಮಿಯ ಸದಸ್ಯರಾದ ಕಮರುದ್ದೀನ್ ಸಾಲ್ಮರ, ಶಂಶೀರ್ ಬುಡೋಳಿ, ಸುರೇಖಾ, ಚಂಚಲಾಕ್ಷಿ ಉಪಸ್ಥಿತರಿದ್ದರು.
ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಬಶೀರ್ ಅಹ್ಮದ್ ಕಿನ್ಯ, ಎಂ. ಅಶೀರುದ್ದೀನ್ ಆಲಿಯಾ, ಸಾರಾ ಅಲಿ ಪರ್ಲಡ್ಕ, ರಶೀದಾ ಉಚ್ಚಿಲ್ ಕವನ ವಾಚಿಸಿದರು.
ಬಾತಿಷ್ ಪುತ್ತೂರು ಮತ್ತು ಬಳಗದಿಂದ ಬ್ಯಾರಿ ಸಂಗೀತ ಹಾಗೂ ಹುಸೈನ್ ಕಾಟಿಪಳ್ಳ ಮತ್ತು ತಂಡದಿಂದ ಬ್ಯಾರಿ ಕವ್ವಾಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.