ಮಂಗಳೂರು/ ಮುಂಬೈ : ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ವಿದೇಶದಲ್ಲೂ ಕಳ್ಳರ ಹಾವಳಿ ಇದ್ದು, ಹಿಂದಿ ಕಿರುತೆರೆಯ ಖ್ಯಾತ ದಂಪತಿ ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾಗೆ ಕೆಟ್ಟ ಅನುಭವವಾಗಿದೆ. ವಿವೇಕ್ ಮತ್ತು ದಿವ್ಯಾಂಕಾ ಇಬ್ಬರೂ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಯುರೋಪ್ಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ಅವರು ಕಳ್ಳರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳ್ಳರಿಂದ ತೊಂದರೆ ಅನುಭವಿಸಿದ ತಾರಾ ಜೋಡಿ :
ಇಟಲಿಯಲ್ಲಿ ಪ್ರಯಾಣಿಸುತ್ತಿದ್ದ ವಿವೇಕ್-ದಿವ್ಯಾಂಕಾ ಅವರ ಪಾಸ್ಪೋರ್ಟ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೀಗಾಗಿ ಇಬ್ಬರೂ ವಿದೇಶದಲ್ಲಿ ಸಂಕಷ್ಟದಲ್ಲಿದ್ದು, ಪೊಲೀಸರೂ ಈ ವಿಚಾರದಲ್ಲಿ ಅಸಹಾಯಕತೆ ತೋರಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದರು.
ದಿವ್ಯಾಂಕಾ ತ್ರಿಪಾಠಿ ಮತ್ತು ವಿವೇಕ್ ದಹಿಯಾ ತಮ್ಮ ಯುರೋಪ್ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅವರಿಗೆ. ಕೆಟ್ಟ ಅನುಭವವೂ ಆಗಿದೆ. ಅಲ್ಲಿ ದಂಪತಿಯನ್ನು ಕಳ್ಳರು ದರೋಡೆ ಮಾಡಿದ್ದು, ಅವರು ಶಾಪ್ ಮಾಡಿದ ವಸ್ತುಗಳು, ವ್ಯಾಲೆಟ್ಗಳು, ಪಾಸ್ಪೋರ್ಟ್ಗಳು ಸೇರಿದಂತೆ ಸುಮಾರು 10 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ.

ದಿವ್ಯಾಂಕಾ ಅವರ ಪತಿ ಹಾಗೂ ನಟ ವಿವೇಕ್ ದಹಿಯಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ದಂಪತಿಯ ಸಾಮಾನುಗಳನ್ನು ಇಟ್ಟಿದ್ದ ಕಾರಿನ ಗಾಜು ಒಡೆದ ಕಳ್ಳರು ಎಲ್ಲ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಘಟನೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಅದ್ಭುತವಾಗಿತ್ತು. ನಾವು ನಿನ್ನೆ ಫ್ಲಾರೆನ್ಸ್ಗೆ ಬಂದಿದ್ದೆವು. ಅಲ್ಲಿ ಒಂದು ದಿನ ಉಳಿಯಲು ಯೋಚಿಸಿದ್ದೆವು. ನಾವು ನಮ್ಮ ವಾಸ್ತವ್ಯಕ್ಕಾಗಿ ಹೋಟೆಲ್ಗೆ ಪರಿಶೀಲಿಸಿದಾಗ, ನಮ್ಮ ಎಲ್ಲಾ ಸಾಮಾನುಗಳನ್ನು ಹೊರಗೆ ನಿಲ್ಲಿಸಿದ ಕಾರಿನಲ್ಲಿ ಇರಿಸಲಾಗಿತ್ತು. ಆದರೆ ನಂತರ ನಾವು ಲಗೇಜ್ ಕೊಂಡೊಯ್ಯಲು ಕಾರಿನ ಬಳಿ ಬಂದಾಗ, ನಮ್ಮ ಕಾರನ್ನು ಒಡೆದು ಹಾಕಿರುವುದು ಕಂಡುಬಂದಿದೆ. ನಮ್ಮಿಬ್ಬರ ಪಾಸ್ಪೋರ್ಟ್ಗಳು, ಪರ್ಸ್ಗಳು, ಆ ಕಾರಿನಲ್ಲಿ ಖರೀದಿಸಿದ್ದ ಬೆಲೆಬಾಳುವ ವಸ್ತುಗಳೆಲ್ಲ ನಾಪತ್ತೆಯಾಗಿದ್ದನ್ನು ಗಮನಿಸಿದಾಗ ಆಘಾ*ತವಾಯಿತು ಎಂದಿದ್ದರು.

ಭಾರತಕ್ಕೆ ಮರಳಲು ನಮಗೆ ಸಹಾಯ ಬೇಕು ಎಂದೂ ವಿವೇಕ್ ಉಲ್ಲೇಖಿಸಿದ್ದರು. ಈ ಘಟನೆಯ ನಂತರ ನಾವು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಆದರೆ, ಅವರು ನಮ್ಮ ದೂರನ್ನು ದಾಖಲಿಸಲು ನಿರಾಕರಿಸಿದರು. ನಮಗೆ ಅವರಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಸಿಸಿಟಿವಿ ದೃಶ್ಯಾವಳಿ ಇಲ್ಲದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : PHOTOS: ರಾಧಿಕಾ ಮರ್ಚೆಂಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಂತ್ ಅಂಬಾನಿ; ಯಾರೆಲ್ಲ ಭಾಗಿಯಾಗಿದ್ರು ಗೊತ್ತಾ?
ಸಮಸ್ಯೆ ಬಗೆ ಹರಿಯಿತು ..ಧನ್ಯವಾದ ತಿಳಿಸಿದ ದಂಪತಿ
ದಂಪತಿ ತೊಂದರೆಯಲ್ಲಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದೀಗ ಈ ಸಮಸ್ಯೆ ಬಗೆ ಹರಿದಿದೆ ಎಂಬ ವಿಚಾರವನ್ನೂ ಹಂಚಿಕೊಂಡಿದ್ದಾರೆ.
ಪ್ರಿಯರೆ, ನಿಮ್ಮ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ತುಂಬಾ ಕಳೆದುಕೊಂಡ ನಂತರ, ಅದೃಷ್ಟವಶಾತ್, ಪ್ರೀತಿ ಕಳೆದುಹೋಗಿಲ್ಲ! ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸಲು ನಮಗೆ ಸಾಧ್ಯವಾಗದ ಕಾರಣ ನಮ್ಮ ಪ್ರೀತಿಪಾತ್ರರಿಗೆ ಮತ್ತು ಸಂಬಂಧಪಟ್ಟ ಜನರಿಗೆ ಅಪ್ಡೇಟ್ ನೀಡುತ್ತಿದ್ದೇನೆ. ಪ್ರಸ್ತುತ ನಾವು ಸ್ನೇಹಿತನಿಂದ ಸಹಾಯವನ್ನು ಪಡೆದಿರುವುದರಿಂದ ಹಣದ ಸಮಸ್ಯೆ ಬಗೆ ಹರಿಯಿತು. ನಾವು ವರದಿ ಮಾಡಿದಂತೆ ಎಲ್ಲವನ್ನೂ ಕಳೆದುಕೊಂಡಿಲ್ಲ. ಕಾರಿನ ಬೂಟ್ನಲ್ಲಿದ್ದ ಕೆಲವು ವಸ್ತುಗಳು ನಮ್ಮ ಬಳಿ ಉಳಿದಿವೆ ಎಂದು ಹೇಳಿಕೊಂಡಿದ್ದಾರೆ.