ವಿಶೇಷ ವರದಿ
ಮಂಗಳೂರು: ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಹಾಗೂ ರಾಜ್ಯ ರಾಜಕೀಯ ಇತಿಹಾಸದಲ್ಲಿ ಹಲವರನ್ನು ಮನೆಗೆ ಕಳುಹಿಸಿ ಮತ್ತೆ ಕೆಲವರನ್ನು ವಿಧಾನಸಭೆಯ ಮೊಗಸಾಲೆಗೆ ಕಳುಹಿಸಿದ್ದ ಬಂಟ್ವಾಳ ಶರತ್ ಮಡಿವಾಳ ಕೊಲೆ ಪ್ರಕರಣ ನಡೆದು ಐದು ವರ್ಷಗಳು ಸಂದಿವೆ.
ಆದರೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವ ಇನ್ನೂ ಪೊಲೀಸರ ಕೈಗೆ ಸಿಗದೆ ಭೂಗತನಾಗಿದ್ದಾನೆ. ಇದೇ ಪ್ರಕರಣದ ಮತ್ತೊಂದು ಪ್ರಮುಖ ಅಂಶ ಎಂದರೆ ಮಡಿವಾಳ ಹತ್ಯೆ ಆರೋಪದ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.

ಕೊಲೆಯಾದ ಶರತ್ ಮಡಿವಾಳ
18 ಮಂದಿಯ ಬಂಧನ-ರಿಲೀಸ್
ಬಂಟ್ವಾಳದ ಆರ್ ಎಸ್ ನಾಯಕ ಶರತ್ ಮಡಿವಾಳ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಬಂಟ್ವಾಳದ ಸಜಿಪ ಮುನ್ನೂರಿನ ಆಲಾಡಿಯ ಶರೀಫ್ ಸಹಿತ ಒಟ್ಟು 18 ಜನರನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಖಲಂದರ್ ನಿಸಾರ್ ಎಂಬಾತ ಸುಮಾರು ಒಂದೂವರೆ ವರ್ಷಕ್ಕಿಂತಲೂ ಅಧಿಕ ಸಮಯ ತಲೆಮರೆಸಿಕೊಂಡಿದ್ದ.
ಕೊನೆಗೆ 2019 ಮಾ.1 ರಂದು ಬಂಟ್ವಾಳ ನ್ಯಾಯಲಯಕ್ಕೆಖಲಂದರ್ ಶರಣಾಗಿದ್ದ. ಆದರೆ ಕೃತ್ಯಕ್ಕೆ ಸಹಕರಿಸಿದ್ದ ಆರೋಪಿ ಇಬ್ರಾಹಿಂ ನಂದಾವರ ಇನ್ನು ಕೂಡ ತಲೆಮರೆಸಿಕೊಂಡಿದ್ದು ಆತನನ್ನು ಹುಡುಕಿ ತರುವುದು ಪೊಲೀಸರಿಗೆ ಸವಾಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಬಂಧಿತರೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ.

ಶರತ್ ಮಡಿವಾಳ ಶವಯಾತ್ರೆ
ಎಲ್ಲಿದ್ದಾನೆ ಇಬ್ರಾಹಿಂ ನಂದಾವರ?
ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಇಬ್ರಾಹಿಂ ನಂದಾವರ ಸಹಕರಿಸಿದ್ದ ಜೊತೆಗೆ ಕೊಲೆ ನಡೆದಾಗ ಬಂಟ್ವಾಳ ಆಸುಪಾಸಿನಲ್ಲಿದ್ದ. ಆದರೆ ತನಿಖೆಯ ಜಾಡು ಹಿಡಿದ ಪೊಲೀಸರ ಕಣ್ಣು ಇಬ್ರಾಹಿಂ ಮೇಲೆ ಬೀಳುತ್ತಿದ್ದಂತೆ ಆತ ಕೊಲ್ಲಿ ರಾಷ್ಟ್ರಕ್ಕೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.
ಆದ್ರೆ ಈವರೆಗೆ ಭಾರತಕ್ಕೆ ಹಿಂತಿರುಗಿಲ್ಲ ಅಥವಾ ಆತನನ್ನು ಭಾರತಕ್ಕೆ ಕರೆ ತರಲು ಬೇಕಾದ ಫೈಲ್ ಪುಟಪ್ ಗೃಹ ಇಲಾಖೆ ಮಾಡಿಲ್ಲ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಈತನ ವಿರುದ್ಧ ದೇಶಾದ್ಯಂತ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಸಹಿತ ಎಲ್ಲೆಡೆ ಸರ್ಚ್ ವಾರೆಂಟ್ ಜಾರಿಯಲ್ಲಿದೆ ಅಂತನೂ ಪೊಲೀಸ್ ಇಲಾಖೆ ಹೇಳುತ್ತಿದೆ.

ಬೆಂಗಳೂರಿನಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ
ಓರ್ವ ಆರೋಪಿ ಮೇಲೆ ನಡೆದಿತ್ತು ಕೊಲೆಯತ್ನ?
ಇದೇ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗಿರುವ ಆರೋಪಿ ಶರೀಫ್ ಎಂಬಾತನ ಮೇಲೆ 2020ರ ಆ.6 ರಂದು ಬಂಟ್ವಾಳದ ಆತನ ಮನೆ ಬಳಿಯೇ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿತ್ತು. ಈ ವೇಳೆ ಆತ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದ.
ಎಸ್ಪಿ ಸೇರಿ ಹಲವರಿಗೆ ವರ್ಗಾವಣೆ ಶಿಕ್ಷೆ ವಿಧಿಸಿದ್ದ ಪ್ರಕರಣ
ಶರತ್ ಮಡಿವಾಳ ಕೊಲೆ ಪ್ರಕರಣ ಕರಾವಳಿಯಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ರೆ ರಾಜ್ಯ ರಾಜಕೀಯವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಆ ಸಮಯದಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿತ್ತು.

ಸುಧೀರ್ ಕುಮಾರ್ ರೆಡ್ಡಿ
ಬಿ. ರಮಾನಾಥ್ ರೈ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಪ್ರಕರಣ ನಡೆದ ಸಂದರ್ಭ ಆಗಿನ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಡಿವೈಎಸ್ಪಿ ರವೀಶ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಯ್ಯ, ಬಂಟ್ವಾಳ ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ ರಕ್ಷಿತ್ ಅವರು ಸಾಮೂಹಿಕವಾಗಿ ವರ್ಗಾವಣೆಯಾಗಿದ್ದರು.
ಭೂಷಣ್ ಜಿ. ಬೊರಸೆ ಸ್ಥಳಕ್ಕೆ ಸುಧೀರ್ ಕುಮಾರ್ ರೆಡ್ಡಿ ಎಸ್ಪಿಯಾಗಿ ನೇಮಕವಾಗಿದ್ದರು. ಅದಾದ ನಂತರದಲ್ಲಿ ಇಬ್ರಾಹಿಂ ನಂದಾವರ ಬಿಟ್ಟು ಉಳಿದೆಲ್ಲಾ ಆರೋಪಿಗಳ ಬಂಧನವಾಗಿತ್ತು.
2 ತಿಂಗಳು ದ.ಕ ಜಿಲ್ಲೆಯಾದ್ಯಂತ ನಿಷೇಧಾಜ್ಞೆ
2017 ಜು.4 ರಂದು ರಾತ್ರಿ 9.30ಕ್ಕೆ ಬಿ.ಸಿ.ರೋಡಿನಲ್ಲಿ ದುಷ್ಕರ್ಮಿಗಳಿಂದ ಶರತ್ ಮಡಿವಾಳನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.
ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶರತ್ ಮಡಿವಾಳ ಜು. 7ರಂದು ಮಧ್ಯರಾತ್ರಿ 12.30ಕ್ಕೆ ಚಿಕಿತ್ಸೆಫಲಕಾರಿಯಾಗದೇ ಮೃತಪಟ್ಟಿದ್ದರು.

ಶರತ್ಗೆ ನಿರ್ಮಿಸಿದ ಸ್ಮಾರದ ಮುಂದೆ ಆತನ ತಂದೆ
ಇದಾದ ಮರುದಿನ ಮಂಗಳೂರಿನ ಆಸ್ಪತ್ರೆಯಿಂದ ಆರಂಭವಾಗಿದ್ದ ಶವಯಾತ್ರೆ ಬಿ.ಸಿ.ರೋಡ್ ತಲುಪುವ ಹೊತ್ತಿಗೆ ಕಲ್ಲು ತೂರಾಟ, ಗಲಭೆನಡೆದು ಹೋಗಿ ಬಂಟ್ವಾಳ ಪ್ರದೇಶ ಅಕ್ಷರಶ ರಣರಂಗವಾಗಿತ್ತು. ಪೊಲೀಸರು ಹರ ಸಾಹಸ ಪಟ್ಟು ಪರಿಸ್ಥಿತಿಯನ್ನು ನಿಭಾಯಿಸಿ ನಿಷೇಧಾಜ್ಞೆ ಹೇರಲಾಗಿತ್ತು.