ಗಾಯಕಿ ಕನ್ನಿಕಾಗೆ ಕೊರೊನಾ: ಪಾರ್ಟಿಯಲ್ಲೂ ಹಾಜರ್, ಕೇರ್ ಲೆಸ್ ನಡೆಗೆ ಎಫ್.ಐ.ಆರ್ ದಾಖಲು
ನವದೆಹಲಿ: ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಲಕ್ನೋ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಮಾರ್ಚ್ ಆರಂಭದಲ್ಲಿ ಲಂಡನ್ನಿಂದ ಭಾರತಕ್ಕೆ ವಾಪಸ್ ಆಗಿದ್ದ ಗಾಯಕಿ ಕನ್ನಿಕಾ ಅವರಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆದರೆ ಸೋಂಕು ಇತರರಿಗೆ ಹರಡದಂತೆ ಅಗತ್ಯವಾದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆ ಲಕ್ನೋ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ನಿನ್ನೆ (ಮಾರ್ಚ್ 20) ಕನ್ನಿಕಾ ಅವರ ಕೋವಿಡ್-19 ಪರೀಕ್ಷೆಯ ವರದಿ ಬಂದಿದ್ದು, ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಆದರೆ ಇದಕ್ಕೂ ಮೊದಲು ಹಲವು ವಿಐಪಿಗಳನ್ನು ಕನ್ನಿಕಾ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಹೀಗಾಗಿ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೂ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.
ಕನ್ನಿಕಾ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಅವರಿಗೆ ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯ (ಕೆಜಿಎಂಯು)ನ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಆದರೆ ಲಕ್ನೊ ಮುಖ್ಯ ವೈದ್ಯಕೀಯ ಅಧಿಕಾರಿಯೊಬ್ಬರು ಕನ್ನಿಕಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಮೆರೆದಿದ್ದಾರೆ ಎಂದು ದೂರಿದ್ದು, ಈ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 188, 269, 270ರ ಅಡಿಯಲ್ಲಿ ಲಕ್ನೊದ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನ್ನಿಕಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಇನ್ನು ಕನ್ನಿಕಾರಿಂದಾಗಿ ಮಾರಕ ಕೊರೋನಾ ವೈರಸ್ ಸೋಂಕಿನ ಬಿಸಿ ಇದೀಗ ರಾಷ್ಟ್ರಪತಿ ಭವನ ಮತ್ತು ಸಂಸತ್ತಿಗೂ ತಟ್ಟಿದೆ.
ಕಾರಣ ಕನ್ನಿಕಾ ಕಪೂರ್ ಬೇರೆ ಬೇರೆ ದಿನಗಳಲ್ಲಿ ಒಟ್ಟು ಮೂರು ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಉನ್ನತ ರಾಜಕಾರಣಿಗಳು ಸೇರಿದಂತೆ ಹಲವಾರು ವಿಐಪಿಗಳನ್ನು ಭೇಟಿ ಮಾಡಿದ್ದರು.
ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಮತ್ತು ಅವರ ತಾಯಿ ಗಾಯಕಿ ಕನ್ನಿಕಾರ ಸಂಪರ್ಕಕ್ಕೆ ಬಂದಿದ್ದರು.

ಈ ಹಿನ್ನೆಲೆ ಈ ನಾಯಕರು ತಮ್ಮನ್ನು ತಾವು ಪ್ರತ್ಯೇಕವಾಗಿರಿಸಿಕೊಂಡಿದ್ದಾರೆ. ಲಂಡನ್ನಿಂದ ಬಂದ ಬಳಿಕ ಕನ್ನಿಕಾ ಐಷಾರಾಮಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದರು.
ಅಲ್ಲದೇ ಕಾನ್ಪುರದ ಸಂಬಂಧಿಕರ ಮನೆಗೆ ಕನ್ನಿಕಾ ಭೇಟಿ ಕೊಟ್ಟಿದ್ದರು ಎಂದು ಲಕ್ನೋನ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲದೇ ಇತ್ತೀಚೆಗೆ ಲಕ್ನೊದ ಆಪ್ತರ ನಿವಾಸದಲ್ಲಿ ಹೋಳಿ ಹಬ್ಬದ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು.
ಆ ಪಾರ್ಟಿಗೆ ರಾಜಸ್ತಾನದ ಮಾಜಿ ಮುಖ್ಯಮಂತ್ರಿ, ರಾಜಕಾರಣಿ ವಸುಂಧರಾ ರಾಜೇ ಮತ್ತು ಅವರ ಪುತ್ರ ಸಂಸದ ದುಶ್ಯಂತ್ ಸಿಂಗ್ ಸೇರಿದಂತೆ ಹಲವರು ಆಗಮಿಸಿ ಒಟ್ಟೊಟ್ಟಿಗೆ ನಿಂತು ಫೋಟೋಗಳನ್ನು ತೆಗೆಸಿಕೊಂಡಿದ್ದರು.

ಪಾರ್ಟಿ ಮುಗಿಸಿಕೊಂಡು ದುಶ್ಯಂತ್ ಸಿಂಗ್ ಸಂಸತ್ತ್ ಕಲಾಪದಲ್ಲಿ ಕಳೆದ ವಾರ ಭಾಗಿಯಾಗಿದ್ದರು.
ಆಗ ಇವರ ಸಂಪರ್ಕಕ್ಕೆ ಹಲವು ರಾಜ್ಯಸಭಾ ಮತ್ತು ಲೋಕಸಭಾ ಸದಸ್ಯರು ಬಂದಿದ್ದಾರೆ.
ಇದೀಗ ಕನ್ನಿಕಾಗೆ ಕೊರೋನಾ ದೃಢಪಟ್ಟ ನಂತರ ಇದೀಗ ದುಶ್ಯಂತ್ ಸಿಂಗ್ ಮತ್ತು ವಸುಂಧರಾ ರಾಜೆ ಕೂಡ ಮನೆಯಲ್ಲಿ ಸ್ವಯಂ ನಿರ್ಬಂಧ ವಿಧಿಸಿ ಉಳಿದುಕೊಂಡಿದ್ದಾರೆ.
ದುಶ್ಯಂತ್ ಸಿಂಗ್ ಅವರು ಕೇವಲ ಕಲಾಪದಲ್ಲಿ ಭಾಗವಹಿಸಿ ಸುಮ್ಮನಾಗಲಿಲ್ಲ.
ಮೊನ್ನೆ ಮಾರ್ಚ್ 18 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಸಚಿವರು, ಸಂಸದರು, ವಿರೋಧ ಪಕ್ಷದ ನಾಯಕರಿಗೆ ಉಪಹಾರ ಕೂಟ ಏರ್ಪಡಿಸಿದ್ದರು.
ಅದಕ್ಕೆ ದುಶ್ಯಂತ್ ಸಿಂಗ್ ಅವರು ಕೂಡ ರಾಜಸ್ತಾನದ ಸಂಸದರ ಜೊತೆ ಆಗಮಿಸಿದ್ದರು.
ಅಷ್ಟೇ ಅಲ್ಲ ಈ ಉಪಹಾರ ಕೂಟದಲ್ಲಿ ಕೇಂದ್ರದ ಮಾಜಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಬಿಜೆಪಿ ಸಂಸದೆ ಹೇಮಮಾಲಿನಿ, ಕೇಂದ್ರ ಸಚಿವ ಅರ್ಜುನ್ ರಾಮ್ ಮೆಘವಾಲ್, ಸಚಿವೆ ಮನೇಕಾ ಗಾಂಧಿ,
ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ, ಬಾಕ್ಸರ್ ಮೇರಿ ಕೊಮ್ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು. ಸದ್ಯ ಮುಂದೇನಾಗುತ್ತಾ ಕಾದು ನೋಡಬೇಕಿದೆ.